‘ಅಹಂಕಾರ ಮನವನಿಂಬುಗೊಂಡಲ್ಲಿ ಲಿಂಗ ತಾನೆಲ್ಲಿಪ್ಪುದೊ‘ ವಿಶ್ವಗುರು ಬಸವಣ್ಣನವರ ವಚನದ ಭಾವಾರ್ಥ ವಿಶ್ಲೇಷಣೆ -; ಲೋಕೇಶ್ ಎನ್ ಮಾನ್ವಿ.
ಓಂ ಶ್ರೀಗುರುಬಸವಲಿಂಗಾಯ ನಮಃ
ಅಹಂಕಾರ ಮನವನಿಂಬುಗೊಂಡಲ್ಲಿ ಲಿಂಗ ತಾನೆಲ್ಲಿಪ್ಪುದೊ
ಅಹಂಕಾರಕ್ಕೆ ಎಡೆಗೊಡದೆ ಲಿಂಗತನುವಾಗಿರಬೇಕು.
ಅಹಂಕಾರರಹಿತವಾದಲ್ಲಿ ಸನ್ನಹಿತ ಕಾಣಾ ಕೂಡಲಸಂಗಮದೇವ.
✍🏾-:ವಿಶ್ವಗುರು ಬಸವಣ್ಣನವರು.
#ಭಾವಾರ್ಥ-;
‘#ಅಹಂಕಾರ ಮನವನಿಂಬುಗೊಂಡಲ್ಲಿ ಲಿಂಗ ತಾನೆಲ್ಲಿಪ್ಪುದೊ’
ನಾನು ನನ್ನಿಂದಲೇ, ಮಾಡುವವ ನೀಡುವವ ನಾನೆ ಎಂಬ ಅಹಂಕಾರ, ನಿನ್ನ ಮನದಲ್ಲಿ ಬಂದ ತತ್ಕ್ಷಣವೇ, ನಿನ್ನ ಕೇಡುಗಾಲ ಶುರುವೆಂದು ಭಾವಿಸು, ನಾನೇ, ಎಂಬ ಅಹಂಕಾರ ನಿನ್ನಲ್ಲಿ ಬಂದ ಮರುಕ್ಷಣವೇ ಆಚಾರವು ಅಡಗುತ್ತದೆ, ಅನಾಚಾರ ತುಂಬುತ್ತದೆ, ಸ್ವಾರ್ಥ ಹೆಚ್ಚುತ್ತದೆ ಅಂತವರಲ್ಲಿ ಲಿಂಗ ತಾನೆಲ್ಲಿಪ್ಪುದೊ.
‘ಅಹಂಕಾರಕ್ಕೆ ಎಡೆಗೊಡದೆ ಲಿಂಗತನುವಾಗಿರಬೇಕು’.
ಮನದಲ್ಲಿ ಅಹಂಕಾರಕ್ಕೆ ಎಡೆಗೊಡದೆ, ನಾನು ನನ್ನದೆಂಬ ಅಹಂ ಭಾವ ತೊಲಗಿ, ಸಕಲವೂ, ಸಕಲರೂ, ಶಿವಸ್ವರೂಪಿಗಳೆಂದು ಅರಿತು ಜಗತ್ ಚೈತನ್ಯವೆಂಬ ಜಂಗಮನಿಗೆ ಶರಣಾಗಿ ವಿನಯ ಭಾವ ಮೂಡಬೇಕು, ದಯೆ,ಕರುಣೆ,ಪ್ರೀತಿ,ಸಮತೆ, ಎಂಬ ಸದಾಚಾರ ತುಂಬಿದ ಮನಸ್ಸು ಸತ್ಕ್ರಿಯೆವುಳ್ಳ ವ್ಯಕ್ತಿಯ ತನುವೇ ಲಿಂಗ ತನು' ಕಾಯ(ದೇಹ)ವೇ ಕೈಲಾಸ, ‘ದೇಹ ದೇಗುಲ' ಭಾವ ಮೂಡಬೇಕು, ಮನವೇ ಮಹಾಮನೆ' ಎಂತಾಗಬೇಕು, ಅಂಗಭಾವ ಅಳಿದು ಲಿಂಗಭಾವ ಮೂಡಬೇಕು, ಸೃಷ್ಟಿಯಿಂದ ಸಮಷ್ಟಿಯ ಭಾವ ತುಂಬಿರಬೇಕು,..
‘ಅಹಂಕಾರರಹಿತವಾದಲ್ಲಿ ಸನ್ನಹಿತ ಕಾಣಾ ಕೂಡಲಸಂಗಮದೇವ’.
ಯಾರಲ್ಲಿ ಅಹಂಕಾರವಿಲ್ಲವೊ, ಅವರಲ್ಲಿ 'ಸೋಹಂ' ಭಾವ ಬರುವುದಿಲ್ಲ, 'ದಾಸೋಹಂ’ ಭಾವ ಬರುತ್ತದೆ, ‘ಜಂಗಮಕ್ಕೆರೆದಡೆ' ಸ್ಥಾವರ ನೆನೆದಿತ್ತು, ಜಂಗಮದ ಮುಖ ಲಿಂಗವಾಗಿ (ಇಡೀ ಸಮಾಜದ)ಮುಖವೇ ಲಿಂಗವಾಗಿ ‘ಸೋಹಂ ಎನ್ನದೇ ದಾಸೋಹಂ’ ಎಂದು ಅಹಂಕಾರ ರಹಿತವಾದವರಲ್ಲಿ ಸದಾ ಸನ್ನಿಹಿತವಾಗಿ ನೆಲಸಿರುವ ನಮ್ಮ ‘ಕೂಡಲ ಸಂಗಮದೇವ' ಎನ್ನುತ್ತಾರೆ ವಿಶ್ವಗುರು ಬಸವಣ್ಣನವರು...👏👏
ವಿಶ್ಲೇಷಣೆ
ಶರಣು ಶರಣಾರ್ಥಿಗಳೊಂದಿಗೆ
ಲೋಕೇಶ್ ಎನ್ ಮಾನ್ವಿ.
Super explanation... Keep it up ಲೋಕೇಶ್ ಅವರೆ.
ReplyDeleteವಚನ ವಿಶ್ಲೇಷಣೆ ಅಥ೯ವತ್ತಾಗಿದೆ
ReplyDeleteಶರಣಾಥಿ೯ಗಳು