‘ನಿಜಸುಖಿ ಹಡಪದ ಅಪ್ಪಣ್ಣನವರು’ ವಿಶೇಷ ಲೇಖನ,.👌🙏🏻
ಓಂ ಶ್ರೀಗುರುಬಸವಲಿಂಗಾಯ ನಮಃ
‘ನಿಜಸುಖಿ ಹಡಪದ ಅಪ್ಪಣ್ಣನವರು’
‘ನಿಜಸುಖಿ ಹಡಪದ ಅಪ್ಪಣ್ಣನವರು’
ಹನ್ನೆರಡನೇ ಶತಮಾನ ಮೌಢ್ಯತೆಯ ಕಾರ್ಮೋಡದಿಂದ ಸರಿದ ಸುಜ್ಞಾನ ಯುಗ, ಭಕ್ತಿ ಯುಗ, ವೈಚಾರಿಕತೆಯ ಯುಗ, ಸಮಾನತೆ ಸೌಹಾರ್ದತೆಯ ಕಂಡ ಯುಗ, ಅದುವೇ ಬಸವ ಮಹಾ ಯುಗ, ಈ ಬಸವ ಯುಗದ ಉತ್ಸಾಹಿ ಶರಣರೇ ಹಡಪದ ಅಪ್ಪಣ್ಣನವರು, ಅಪ್ಪಣ್ಣನವರ ಜನ್ಮಸ್ಥಳವು ಕೂಡ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ಜನಿಸಿದ್ದಾರೆ ಎಂಬ ಪ್ರತೀತಿ ಇದೆ, ಇದು ಬಸವಣ್ಣನವರ ಜನ್ಮಸ್ಥಳವಾದ ಇಂಗಳೇಶ್ವರದಿಂದ 6 ಕಿ,ಮಿ ದೂರ ಇದೆ. ಹೀಗಿರುವಾಗ ಹಡಪದ ಅಪ್ಪಣ್ಣ ಎಂದೇ ಪ್ರಖ್ಯಾತರಾದ ಶರಣರ, ಕಾಯಕವಾದ ಹಡಪ ಪದಕ್ಕೆ ಎರಡು ಅರ್ಥವಿದೆ, ಹಡಪ ಎಂದರೆ ಡಬ್ಬೆ ಅದು ವೀಳ್ಯೆದ ಡಬ್ಬೆ, ಹಾಗೂ ಕ್ಷೌರ ಸಾಮಗ್ರಿಯ ಡಬ್ಬೆ, ಎರಡಕ್ಕೂ ಹಡಪ ಎಂಬ ಹೆಸರಿದೆ, ಹೀಗಿರುವಾಗ ಅಪ್ಪಣ್ಣನವರು ಅಪಾರ ಭಕ್ತಿ ಜ್ಞಾನವುಳ್ಳವರಾಗಿದ್ದರು ಕಾಯಕ ಜೀವಿಗಳಾಗಿ ಕ್ಷೌರ ವೃತ್ತಿಯನ್ನು ನಡೆಸಿಕೊಂಡು ಹೋಗುತ್ತಿದ್ದ ಶರಣರು, ಮಾಡುವ ಕಾಯಕ ಯಾವುದಾದರೂ ಅದು ಮೇಲೂ ಅಲ್ಲ, ಕೀಳೂ ಅಲ್ಲ, ತನು_ಮನ_ಧನವೆಂಬ ತ್ರಿಕರಣ ಶುದ್ಧವಾಗಿ ಮಾಡುವುದೇ ಕಾಯಕವಾಗಿದೆ, ಕಾಯಕ ನಿಷ್ಠರಾದ ಶರಣ ಹಡಪದ ಅಪ್ಪಣ್ಣನವರು, ಲಿಂಗಮ್ಮ ಎಂಬ ಕನ್ಯೆಯನ್ನು ನೋಡಿ ವಿವಾಹವಾದರು, ಶರಣೆ ಲಿಂಗಮ್ಮನವರು ಕೂಡ ಅಪಾರವಾದ ಜ್ಞಾನವನ್ನು ಹೊಂದಿದವರಾಗಿದ್ದರು, ಆಗಿನ ಕಾಲದ ಜಾತಿ ವ್ಯವಸ್ಥೆಯಲ್ಲೂ ಭೌತಿಕವಾಗಿ ಹಿಂದುಳಿದವರಾಗಿದ್ದೂ, ಮಾನಸಿಕವಾಗಿ ಅತ್ಯಂತ ಸದೃಢ ಮನಸ್ಸಿದನವರಾಗಿ ಮೇರು ಜ್ಞಾನವನ್ನು ಹೊಂದಿದ್ದ ಶರಣ ದಂಪತಿಗಳು,
ಕನಿಷ್ಠದಲ್ಲಿ ಹುಟ್ಟಿದೆ, ಉತ್ತಮರಲ್ಲಿ ಬೆಳೆದೆ
ಸತ್ಯಶರಣರ ಪಾದವಿಡಿದೆ, ಆ ಶರಣರ
ಪಾದವಿಡಿದು ಗುರುವ ಕಂಡೆ, ಲಿಂಗವ ಕಂಡೆ
ಜಂಗಮವ ಕಂಡೆ, ಪಾದೋದಕವ ಕಂಡೆ
ಪ್ರಸಾದವ ಕಂಡೆ, ಇಂತಿವರ ಕಂಡೆನ್ನ ಕಂಗಳ
ಮುಂದಣ ಕತ್ತಲೆ ಹರಿಯಲೊಡನೆ ಮಂಗಳದ
ಮಹಾಬೆಳಗಿನೊಳೊಗೋಲಾಡಿ ಸುಖಿಯಾದೆನಯ್ಯಾ
ಅಪ್ಪಣ್ಣಪ್ರಿಯ ಚನ್ನಬಸವಣ್ಣ
ಎಂದು ಹೇಳುವ ಶರಣ ಹಡಪದ ಅಪ್ಪಣ್ಣನವರ ಧರ್ಮ ಪತ್ನಿ ಶರಣೆ ಲಿಂಗಮ್ಮನವರು,
ಅಪ್ಪ ಬಸವಣ್ಣನವರ ಬಗ್ಗೆ ತಿಳಿದ ಕೂಡಲೇ ದಂಪತಿಗಳಿಬ್ಬರು ಸಂಗಮಕ್ಕೆ ಬಂದು ಬಸವಣ್ಣನವರನ್ನು ಕಂಡರು, ಅಲ್ಲೇ ಕೆಲಕಾಲ ನಲೆಸಿದರು, ನಂತರ ಅಣ್ಣಬಸವಣ್ಣನವರೊಡನೆ ಕಲ್ಯಾಣಕ್ಕೆ ಬಂದರು , ಅಣ್ಣನ ಮೇಲೆ ಅಪಾರವಾದ ಗೌರವ ಮತ್ತು ಭಕ್ತಿಯುಳ್ಳವರಾಗಿದ್ದ ಶರಣ ಅಪ್ಪಣ್ಣ ಮತ್ತು ಶರಣೆ ಲಿಂಗಮ್ಮನವರು ತಮ್ಮ ಒಂದು ವಚನದಲ್ಲಿ ಅವರ ಭಕ್ತಿಯನ್ನು ಹೀಗೆ ಪ್ರಸ್ತುತ ಪಡಿಸುತ್ತಾರೆ,
ಅಯ್ಯಾ ಎನೆಗೆ ಬಸವಪ್ರಿಯನೆಂದರೂ ನೀನೆ,
ಕೂಡಲ ಚೆನ್ನಬಸವಣ್ಣನೆಂದರೂ ನೀನೆ,
ಗುರುವೆಂದರೂ ನೀನೆ, ಲಿಂಗವೆಂದರೂ ನೀನೆ,
ಜಂಗಮವೆಂದರೂ ನೀನೆ, ಪ್ರಸಾದವೆಂದರೂ ನೀನೆ.
ಅದೇನು ಕಾರಣವೆಂದರೆ,
ನೀ ಮಾಡಲಾಗಿ ಅವೆಲ್ಲವು ನಾಮರೂಪಿಗೆ ಬಂದವು.
ಅದು ಕಾರಣ, ನಾನೆಂದರೆ ಅಂಗ, ನೀನೆಂದರೆ ಪ್ರಾಣ.
ಈ ಉಭಯವನು ನೀವೆ ಅರುಹಿದಿರಾಗಿ,
ಇನ್ನು ಭಿನ್ನವಿಟ್ಟು ನೋಡಿದೆನಾದರೆ, ಚನ್ನಮಲ್ಲೇಶ್ವರ ನೀವೆ ಬಲ್ಲಿರಿ.
ಎಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣನಲ್ಲಿ ಏಕವಾದ ಕಾರಣ,ಎನಗೆ ಭವವಿಲ್ಲ, ಬಂಧನವಿಲ್ಲ, ಅದಕ್ಕೆ ನೀವೇ ಸಾಕ್ಷಿ.
ಬಸವಣ್ಣನೇ ಗುರುವಾದನು, ಲಿಂಗವಾದನು ಜಂಗಮವಾದನು, ಪ್ರಸಾದವಾದನು,ಇದೇನು ಕಾರಣವೆಂದರೆ ನಾನು ದೇಹವಾದರೆ, ಬಸವಣ್ಣನೇ ಪ್ರಾಣವಾದನು ಎಂದು ಬಸವಪ್ರಿಯರಾದರು ಅಪ್ಪಣ್ಣನವರು,
ಹೀಗಿರುವಾಗ ಹಡಪದರ ಮುಖ ನೋಡಿದರೆ ಅಪಶಕುನ ಎಂದು ಬೊಬ್ಬಿಡುತ್ತಿದ ಮೇಲ್ಜಾತಿಯವರ ಮೌಢ್ಯತೆಯನ್ನು ದಿಕ್ಕರಿಸಿ ಅಣ್ಣಬಸವಣ್ಣನವರೇ ಹಡಪದ ಅಪ್ಪಣ್ಣನವರನ್ನು ತಮ್ಮ ಆಪ್ತಕಾರ್ಯದರ್ಶಿಯನ್ನಾಗಿ ನೇಮಿಸಿಕೊಂಡರು, ನಂತರ ಜನರ ಮೂಢನಂಬಿಕೆಯನ್ನು ಹೋಗಲಾಡಿಸಲೆಂದೇ ತಮ್ಮನ್ನು ಭೇಟಿಯಾಗಲು ಬರುವ ಯಾರೇ ಆಗಲಿ, ಅವರು ಮೊದಲು ಹಡಪದ ಅಪ್ಪಣ್ಣನವರನ್ನು ಭೇಟಿಯಾಗಿಯೇ ಬರಬೇಕೆಂಬ ನಿಯಮ ಮಾಡಿದರು, ಅದರಂತೆ ಎಲ್ಲರೂ ಅಪ್ಪಣ್ಣನವರನ್ನು ಭೇಟಿಯಾಗಿ ಬರುತ್ತಿದ್ದರು, ಜಾತೀಯತೆ ಮೂಢನಂಬಿಕೆ ರಹಿತ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವಲ್ಲಿ ಹಡಪದ ಅಪ್ಪಣ್ಣನವರು ಸದಾ ಬಸವಣ್ಣನವರ ಬಲಗೈ ಬಂಟರಾಗಿರುತ್ತಿದ್ದರು, ಹೀಗಿರುವಾಗ ಅಲ್ಲಮಪ್ರಭುದೇವರು ಮತ್ತು ಸಿದ್ಧರಾಮೇಶ್ವರರು ಕಲ್ಯಾಣಕ್ಕೆ ಬಂದು ಬಸವಣ್ಣನವರ ಮಹಾಮನೆಗೆ ಆಗಮಿಸುತ್ತಿರುವುದನ್ನು ಗಮನಿಸಿದ ಅಪ್ಪಣ್ಣನವರು ಇಷ್ಟಲಿಂಗ ಪೂಜೆಯಲ್ಲಿ ಮಗ್ನರಾದ ಬಸವಣ್ಣನವರನ್ನು ಜಾಗ್ರತಗೊಳಿಸುತ್ತಾರೆ, ಹೀಗೆ ಅಣ್ಣನವರಿಗೆ ನಿಕಟವರ್ತಿಯಾದ ಶರಣರು, ಪ್ರಪ್ರಥಮ ಸಂಸತ್ತಾದ ಅನುಭವ ಮಂಟಪದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು, ತಮ್ಮ ಅಪಾರವಾದ ಜ್ಞಾನದಿಂದ ಶರಣರ ಮನ್ನಣೆಗಳಿಸುತ್ತಿದ್ದರು, ಸದಾ ಅಪ್ಪ ಬಸವಣ್ಣನವರ ಆಪ್ತ ಒಡನಾಡಿಗಳಾಗಿ ಅನುದಿನ, ಅನುಕ್ಷಣವೂ, ಅಣ್ಣನವರ ದಿವ್ಯ ಸಾನಿಧ್ಯದಲ್ಲಿ ಇರುತ್ತಿದ್ದ ಅಪ್ಪಣ್ಣನವರು ಎಲ್ಲಾ ಶರಣರ ಮೆಚ್ಚುಗೆಗೆ ಪಾತ್ರರಾಗಿ ‘ನಿಜಸುಖಿ ಅಪ್ಪಣ್ಣ’ ಎಂಬ ಬಿರುದನ್ನು ಪಡೆದರು, ಹಡಪದ ಅಪ್ಪಣ್ಣನವರ ಧರ್ಮಪತ್ನಿ ಲಿಂಗಮ್ಮನವರು ಕೂಡ ಮಹಾಜ್ಞಾನಿಗಳಾಗಿದ್ದರು, ಇವರು ‘ನಿಜಮುಕ್ತೆ ಲಿಂಗಮ್ಮನವರು’ ಎಂದೇ ಪ್ರಖ್ಯಾತಿ ಪಡೆದರು, ಅದನ್ನು ತಮ್ಮ ವಚನದ ಮೂಲಕ ತಿಳಿಯಪಡಿಸುತ್ತಾರೆ,.
ಬಸವೇಶ್ವರ ಚೆನ್ನಬಸವೇಶ್ವರ ಮಡಿವಾಳಯ್ಯ ಅಲ್ಲಮಪ್ರಭು
ಚೆನ್ನಮಲ್ಲೇಶ್ವರ ಹಡಪದಪ್ಪಣ್ಣ
ತಮ್ಮೆಲ್ಲರ ತೊತ್ತಿನ ತೊತ್ತಿನ ಪಡಿದೊತ್ತಿನ ಮಗಳೆಂದು
ಹೊತ್ತು ಹೊತ್ತಿಗೆ ಎಚ್ಚರವ ಪಾಲಿಸಿ ರಕ್ಷಣೆಯ ಮಾಡಿದ ಕಾರಣದಿಂದ
ತಮ್ಮೆಲ್ಲರ ಶ್ರೀಪಾದದಲ್ಲಿಯೆ ನಿಜಮುಕ್ತಳಾದೆನಯ್ಯಾಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
ಎಂದು ಬಸವಾದಿ ಶರಣರ ಮನೆಯ ಮಗಳಾಗಿ ನಾನು ನಿಜಮುಕ್ತಳಾದೆನು ಎನ್ನುತ್ತಾರೆ ಶರಣೆ ಲಿಂಗಮ್ಮನವರು, ಹೀಗೆ ಶರಣ ಸತಿಪತಿಗಳಿಬ್ಬರು ಹಿತವಾಗಿ ಬದುಕಿ ಶ್ರೇಷ್ಠವಾದ ಮೌಲ್ಯಗಳನ್ನು ತಿಳಿಸುತ್ತಾರೆ,
ಶರಣ ಹಡಪದ ಅಪ್ಪಣ್ಣನವರ ನಾಮಾಂಕಿತ- ಬಸವಪ್ರಿಯ ಕೂಡಲಚೆನ್ನಬಸವಣ್ಣ,
ಲಭ್ಯವಿರುವ ವಚನಗಳು ಸಂಖ್ಯೆ 251 ಮಾತ್ರ,. ಇನ್ನು ಶರಣೆ ಲಿಂಗಮ್ಮನವರ ನಾಮಾಂಕಿತ- ಅಪ್ಪಣ್ಣಪ್ರಿಯ ಚನ್ನಬಸವಣ್ಣ .
ಸಧ್ಯ ಶರಣೆ ಲಿಂಗಮ್ಮರ 114 ವಚನಗಳು ಮಾತ್ರ ಲಭ್ಯವಿವೆ,.
ಬಸವಣ್ಣನವರಿಗೆ ಅಪ್ಪಣ್ಣನವರು ಆಪ್ತಕಾರ್ಯದರ್ಶಿ ಮಾತ್ರವಲ್ಲ, ತಮ್ಮ ಜೀವದ ಒಡನಾಡಿಯಾಗಿದ್ದರು, ಪ್ರತಿ ಕ್ಷಣದಲ್ಲೂ ಬಸವಣ್ಣನವರಿಗೆ ಪ್ರತಿಯೊಂದು ಮಾಹಿತಿಯನ್ನೂ ಮೊದಲು ತಿಳಿಸುತ್ತಿದ್ದರು, ಕಲ್ಯಾಣಕ್ಕೆ ಬರುವ ಶರಣ ಸಮೋಹಕ್ಕೆ ತಾಂಬೂಲ ಕೊಟ್ಟು ಸ್ವಾಗತಿಸುತ್ತಿದ್ದರು, ಕ್ಷಣವಾದರೂ ಬಸವಣ್ಣನವರನ್ನು ಬಿಟ್ಟಿರಲಾರದ ಜೀವ ಅಪ್ಪಣ್ಣನವರದ್ದು, ಕಲ್ಯಾಣ ಕ್ರಾಂತಿಯ ಕೊನೆಯ ದಿನಗಳಲ್ಲೂ ಇದು ಸಾಬೀತಾಗಿದೆ, ಹರಳಯ್ಯನವರ ಮಗ ಶೀಲವಂತ, ಮತ್ತು ಮದುವರಸರ ಮಗಳು ಲಾವಳ್ಯರ ವಿವಾಹ ಮಾಡಿದ ನಂತರವಂತೂ ಕಲ್ಯಾಣ ಕೆಂಡದುಂಡೆಯಾಗಿತ್ತು,
ಶರಣರಾದ ಹರಳಯ್ಯ_ಶೀಲವಂತ_ಮದುವರಸರಿಗೆ ಎಳೆಹೊಟ್ಟೆ ಶಿಕ್ಷೆಯಾಯ್ತು, ಅಪ್ಪ ಬಸವಣ್ಣನವರಿಗೆ ಗಡಿಪಾರು ಶಿಕ್ಷೆಯಾಯ್ತು, ಕಂಡ ಕಂಡಲ್ಲಿ ಶರಣರ ಹತ್ಯೆಯಾಯ್ತು, ಸಿಕ್ಕ ಸಿಕ್ಕಲ್ಲಿ ಶರಣರ ರುಂಢ ಕಡೆಯುವ ಆದೇಶ ಕೊಂಡೆ ಮಂಚಣ್ಣ ಕೊಟ್ಟಾಯ್ತು, ಶರಣರ ಮೇಲೆ ರಣಭೀಕರ ಹಲ್ಲೆ ಹತ್ಯೆ ಕೊಲೆಗಳಾದವು, ಕಂಡ ಕಂಡಲ್ಲಿ ವಚನ ಸಾಹಿತ್ಯವನ್ನು ಸುಟ್ಟರು, ಆದರೂ ಪಟ್ಟು ಬಿಡದ ಶರಣರು ತಲೆಯ ಮೇಲೆ ವಚನ ಕಟ್ಟುಗಳನ್ನಿಟ್ಟುಕೊಂಡು ಕಲ್ಯಾಣ ತೊರೆದರು, ‘ಪ್ರಾಣ ಬಿಟ್ಟೇವು ವಚನಗಳನ್ನು ಸುಡಲು ಬಿಡುವುದಿಲ್ಲ’ ಎಂಬ ದಿಟ್ಟ ನಿಲುವಿನಿಂದ ಒಬ್ಬೊಬ್ಬರು ಒಂದೊಂದು ಕಡೆ ಹೋದರು, ಅಲ್ಲಮರು ಅಕ್ಕಮಹಾದೇವಿಯವರು ಮುನ್ನವೇ ಶ್ರೀಶೈಲದ ಕದಳಿವನಕ್ಕೆ ತೆರಳಿದರು, ಸಿದ್ಧರಾಮರು ಮತ್ತು ಉರಿಲಿಂಗಪೆದ್ದಿಗಳು ಸೊಲ್ಲಾಪುರದ ಹಾದಿ ಹಿಡಿದರು, ಚೆನ್ನಬಸವಣ್ಣನವರ ಜೊತೆ ಅಸಂಖ್ಯಾತರು ಉಳವಿ ಮಾರ್ಗವಿಡಿದರು, ಆದರೆ ಹಡಪದ ಅಪ್ಪಣ್ಣನವರು ಬಸವಣ್ಣನವರಿಗೆ ವಿಷಯ ತಿಳಿಸಲು ಸಂಗಮಕ್ಕೆ ತೆರಳಿದರು, ಸಂಗಮದಲ್ಲಿ ತಂಗಿದ್ದ ಬಸವಣ್ಣನವರು ಭೇಟಿಯಾದ ನಂತರ ಬಸವಣ್ಣನವರು ತಂಗಡಗಿಯಲ್ಲಿದ್ದ ನೀಲಾಂಬಿಕೆಯವರನ್ನು ಕರೆತನ್ನಿ ಎಂದು ಹಡಪದ ಅಪ್ಪಣ್ಣನವರನ್ನು ಕಳಿಸುತ್ತಾರೆ, ಅಪ್ಪಣ್ಣನವರು ತಂಗಡಗಿ ತಲುಪುವಷ್ಟರಲ್ಲಿ ಕೂಡಲಸಂಗಮದಲ್ಲಿ ಘೋರ ಅತೀಘೋರವಾದ ಘಟನೆ ನಡೆದೇ ಹೋಗಿತ್ತು, ವಿಶ್ವಕ್ಕೆ ಮಾನವೀಯತೆಯ ಸಾರವನ್ನು ತಿಳಿಸಿದ, ಅಹಿಂಸಾವಾದಿ ವಿಶ್ವಗುರು ಅಪ್ಪ ಬಸವಣ್ಣನವರನ್ನು ಕೂಡಲಸಂಗಮದ ಸಮೀಪ ಹತ್ಯೆ ಮಾಡಲಾಗಿತ್ತು , ತಂಗಡಗಿ ತಲುಪಿದ ಅಪ್ಪಣ್ಣನವರು ನೀಲಮ್ಮನವರಿಗೆ ವಿಷಯ ತಿಳಿಸುತ್ತಾರೆ,. ಅಷ್ಟರಲ್ಲೇ ಬಸವಣ್ಣನವರು ಲಿಂಗೈಕ್ಯರಾದ ಸುದ್ದಿ ತಿಳಿದ ನೀಲಮ್ಮನವರು ತಂಗಡಗಿಯಲ್ಲೇ ‘ಅಲ್ಲಿದ್ದ ಸಂಗಯ್ಯ ಇಲ್ಲಿಲ್ಲವೇ’ ಎಂದು ಹೇಳುತ್ತಾರೆ ಅಲ್ಲೇ ಅಪ್ಪ ಬಸವಣ್ಣನವರ ಧರ್ಮಪತ್ನಿ ನೀಲಮ್ಮ ತಾಯಿಯವರು ಮತ್ತು ಹಡಪದ ಅಪ್ಪಣ್ಣನವರು ಕರಸ್ಥಲದ ಲಿಂಗಮಧ್ಯದಲ್ಲಿ ಅಣ್ಣಬಸವಣ್ಣನನ್ನೇ ಕಂಡು ಅಲ್ಲೇ ತಂಗಡಗಿಯಲ್ಲೇ ಲಿಂಗೈಕ್ಯರಾಗುತ್ತಾರೆ,.
ಹೀಗೆ ಬದುಕಿನುದ್ದಕ್ಕೂ ಅಪ್ಪ ಬಸವಣ್ಣನವರನ್ನೇ ಅವರಿಸಿಕೊಂಡ ಹಡಪದ ಅಪ್ಪಣ್ಣನವರು ಅತ್ಯುನ್ನತ ರೀತಿಯಲ್ಲಿ ಬದುಕಿ ಬಾಳಿ ಮಾದರಿಯಾದರು, ಬಸವಣ್ಣನವರನ್ನೇ ಪ್ರಾಣವೆಂದಿದ್ದ ಹಡಪದ ಅಪ್ಪಣ್ಣನವರು ತಂಗಡಗಿಯ ಬಸವ ಬಯಲಲ್ಲಿ ಬಯಲಾಗಿ ಒಂಬತ್ತು ಶತಮಾನಗಳಾದರೂ ಅಜರಾಮರರಾಗಿ ಉಳಿದಿದ್ದರೆ ನಮ್ಮೆಲ್ಲರ ಹೃದಯದಲ್ಲಿ,
ಅವರ ನಡೆ-ನುಡಿ ಬದುಕು ಆದರ್ಶಮಯ ಸಿದ್ಧಾಂತ ನಮ್ಮೆಲ್ಲರಿಗೂ ಸ್ಫೂರ್ತಿ ಮತ್ತು ಮಾದರಿಯಾಗಿವೆ,.
ಶರಣರು ಅವರ ವಚನಗಳ ಮುಖೇನ ಜೀವಂತವಾಗಿದ್ದಾರೆ, ವಚನಗಳನ್ನು ಓದುವಾಗ ಉತ್ಸಾಹದ ಚಿಲುಮೆಯಾಗಿ , ಅನುಸರಿಸುವಾಗ ಆಶೀರ್ವದಿಸುವ ಗುರು ಹಿರಿಯರಾಗಿ ನಮ್ಮೆಲ್ಲರ ಜೊತೆಗಿದ್ದರೆ ಬಸವಾದಿ ಶಿವಶರಣರು,. 👏🏻👏🏻👏🏻👏🏻
ಲೇಖನ-; ಲೋಕೇಶ್ ಎನ್ ಮಾನ್ವಿ.
-/9972536176
ಎಲ್ಲಾ ಬಸವಾದಿ ಶಿವಶರಣರ ನೆನೆದು
ನಿಜಸುಖಿ ಹಡಪದ ಅಪ್ಪಣ್ಣನವರ ಜಯಂತಿ ಹಾರ್ದಿಕ ಶುಭಾಶಯಗಳು,.💐💐
ಈ ವಿಶೇಷ ಲೇಖನವನ್ನು ಓದಿದ ಸರ್ವರಿಗೂ ಹೃಪೂರ್ವಕ ಶರಣು ಶರಣಾರ್ಥಿಗಳು,..🙏🏻🙏🏻💐💐
ಲೇಖನ ಚೆನ್ನಾಗಿದೆ
ReplyDelete