ವೀರವಿರಾಗಿಣಿ ಅಕ್ಕಮಹಾದೇವಿಯವರ ಯೋಗಾಂಗ ತ್ರಿವಿಧಿ.
ವೀರವಿರಾಗಿಣಿ ಅಕ್ಕಮಹಾದೇವಿಯವರ ಯೋಗಾಂಗ ತ್ರಿವಿಧಿ.
ಶ್ರೀ ಮಹಾಮಹಿಮನೆ ಸೋಮಶೇಖರ ಗುರುವೆ,
ಕಾಮಿತ ಫಲವ ಕೊಡು ಕಂಡಾ ಎನ್ನ| ಹೃ
ದ್ವಾಮದೊಳ್ ನಿಂದು ಮೆರೆ ಕಂಡಾ || 1 ||
ಮೊದಲು ಮಾಡುವೆ ನಾನು ಸದಮಲ ಗುರುವಿನ
ಚದುರ ಮತಿಗಳನು ಬಲಗೊಂಡು | ತತ್ವದ
ಪದಗಳನಾಂತು ಮುದದಿಂದ || 2 ||
ಜೀವ ಪರಮರ ಭೇದಭಾವವನರಿವಡೆ
ಆವಾವಮುಖದೊಳಿರುತಿಹುದೊ| ಎನ್ನಯನು
ಭಾವಕ್ಕೆ ಬಂದುದನೊರೆವೆನು || 3 ||
ಶರಣರ ನೆಲೆಗಳನ್ನು ಅರಿವಡೆ ಅಗಣಿತವು
ಹರಿಯಜ ಸುರರಿಗಳವಲ್ಲ | ವೆಂದೆನಲು
ಒರೆದೆನು ಅವರ ಕೃಪೆಯಿಂದ || 4 ||
ಎಲ್ಲ ದೇವರ ದೇವ ವಲ್ಲಭನೆ ಗುರು ಚನ್ನ
ಮಲ್ಲಿಕಾರ್ಜುನನೆ ಮನದೊಳಗೆ| ಇರು ಕಂಡಾ
ಬಲ್ಲಂತೆ ನಿಮ್ಮ ಸ್ತುತಿಸುವೆನು || 5 ||
ಆರು ಭೂತಂಗಳಲಿ ಆರಾರು ತತ್ವದಲ್ಲಿ
ಪೂರೈಸಿ ಇಪ್ಪ ಘನವನ್ನು | ಮನದಲ್ಲಿ
ಆರೈದು ತಿಳಿದಡವ ಮುಕ್ತ || 6 ||
ಮಾಘಮಾಸವುಪೋಗೆ ಮೇಗೆ ಬಂದಿತು ಚೈತ್ರ
ಬೇಗ ಮಾಮರನು ತಣ್ಣೀರೆರೆ | ಅದ ಕಂಡು
ಕೂಗಿ ಕರೆಯಿತ್ತು ಕಳಕಂಠ || 7 ||
ಆಕಾಶದೊಳಗಣ ಜ್ಯೋತಿಯ ಪ್ರಭೆ ಬಂದು
ಲೋಕಂಗಳೊಳಗೆ ಮುಸುಕಲು | ಅದರೊಳಗೆ
ಏಕಾಂಗಿಯಾದಡವ ಯೋಗಿ || 8 ||
ಒಂಬತ್ತು ವೆಜ್ಜದ ತುಂಬಿದ ಕೊಡನೊಳಗೆ
ಸಂಭ್ರಮದ ಮುತ್ತು ಇರುತಿಹುದು | ಅದರನುವ
ನಂಬಿಕಂಡವನೆ ಕಡು ಜಾಣ || 9 ||
ಅಷ್ಟದಳಕಮಲದ ಬಟ್ಟಬಯಲೊಳಗೊಂದು
ಮುಟ್ಟಬಾರದ ಘನವಿಹುದು | ಅದರೊಳಗೆ
ದೃಷ್ಟಿ ಇಟ್ಟವನೆ ನಿಜಮುಕ್ತ || 10 ||
ಕೋಡಗದ ಒಡಗೂಡಿ ಆಡುವ ನರಿನಾಯಿ
ಗೀಡಾದ ಮನೆಯ ಮುರಿದೆನು| ಮತ್ತೊಂದು
ಗೂಡಿನೊಳು ನಾನು ಮೆರೆದೆನು || 11 ||
ಒಡಹುಟ್ಟಿದೈವರ ಒಡನೆ ಶಿರಗಳ ಹರಿದು
ಮಡದಿಯ ಕರವ ಹಿಡಿದೆನು | ಮುಂದಣ
ನಡುಬಟ್ಟೆಯೊಳಗೆ ನಡೆದೆನು || 12 ||
ನುಡಿಯಬಾರದು ಹಣ್ಣು ಕಡೆಯೊಳಗಿರಲಾಗಿ
ಮಡದಿಯೋರ್ವಳು ಅದಕಂಡು | ಗ್ರಹಿಸಿ
ನುಡಿಯೊಳಗಾಗಿ ಮೆರೆಯಿತ್ತು || 13 ||
ನೂರೊಂದು ಮಣಿಗಳನು ಮೂರು ಭಾಗವ ಮಾಡಿ
ಮೂರು ಪುರುಷರಿಗೆ ಅಳವಡಿಸಿ | ಮೂವರನು
ಸೇರಿ ನಾನಳಿದು ಬಯಲಾದೆ ||14 ||
ಒಂದು ರತ್ನವು ತಾನು ಮುಂದೆ ಈರಾರಾಗಿ
ಕುಂದದೈವತ್ತು ತೆರನಾದ | ರತ್ನವು
ಸಂದಿತು ಎನ್ನ ಮನದೊಳಗೆ . || 15 ||
ಊರೊಳಗಾಡುವ ಮಾರಿಯ ಹಿಡಿತಂದು
ಭಾರಿಯ ಕೋಳ ಅಳವಡಿಸಿ | ಆ ಪುರವ
ಮಾರಿದೆ ಒಬ್ಬ ಚದುರಂಗೆ || 16 ||
ಕೋಟಿ ರವಿಶಶಿಗಳಿಗೆ ಮೀಟಿದ ಪ್ರಭೆ ಬಂದು
ನಾಟಿತ್ತು ಎನ್ನ ಕರದೊಳಗೆ | ಅದರಿಂದ
ದಾಟಿದೆನು ಭವದ ಕುಣಿಗಳನು || 17 ||
ಅಂಬರದೊಳಗಣ ತುಂಬಿದ ಕೊಡನುಕ್ಕಿ
ಕುಂಭಿನಿಯ ಮೇಲೆ ಸುರಿಯಲು | ಮಾನವರು
ಶಂಭುಲೋಕಕ್ಕೆ ತೆರಳಿದರು || 18 ||
ಮೊರೆವ ನಾದವ ಕೇಳಿ ಉರಿವ ಜ್ಯೋತಿಯ ನೋಡಿ
ಸುರಿವ ಅಮೃತವ ದಣಿದುಂಡ | ಕಾರಣವು
ತೊರೆದನು ಜನನ ಮರಣಗಳ || 19 ||
ಅಷ್ಟದಿಕ್ಕಿಲಿ ಅಷ್ಟಶಕ್ತಿಯರು ರುದ್ರರು
ಅಷ್ಟದಿಕ್ಪಾಲಗಣಗಳ | ನಡುವಿರ್ದ
ಕಟ್ಟಾಣಿ ಮುತ್ತ ಬರಸೆಳೆದೆ || 20 ||
ಒಂಬತ್ತು ದ್ವಾರದ ಇಂಬುಗಳ ಬಲಿವುತ್ತ
ತುಂಬಿ ಸುಷುಮ್ಮೆಯೋಳು ಮನವ | ನೋಡಿ
ಕುಂಭದೊಳಮೃತ ಸುರಿವುದು || 21 ||
ಆರು ಮುಖ ಮುತ್ತನು ನೀರೊಳಗೆ ಇರಿಸಲು
ನೀರಳಿದು ಮುತ್ತು ಉಳಿಯಲು | ಆ ಮಣಿಯ
ಸೇರಿಸಿದೆನೆನ್ನಯ ಉರದೊಳಗೆ || 22 ||
ಉಪ್ಪರ ಗುಡಿ ಮೇಲೆ ಸರ್ಪನು ಹೆಡೆಯತ್ತಿ
ಎಪ್ಪತ್ತು ಪುರವ ನಲಿದುಂಡು | ದಣಿಯದೆ
ಕಪ್ಪೆಯ ಶಿರವ ಮುರಿಯಿತ್ತು || 23 ||
ಹಿತ್ತಲಬಾಗಿಲ ತೆರೆದು ಸತ್ತವನ ಎಬ್ಬಿಸಿ
ಹೆತ್ತಮ್ಮನ ಕರೆವ ಪಿಡಿಯಲು| ಅವಳೀಗ
ಇತ್ತಳೈ ತನ್ನ ಪದಕವನು || 24 ||
ಕೋಣನ ಕೊಂಬಿನ ಮೇಲೆ ಮಾಣದೆ ಕಪಿಯೇರಿ
ಜಾಣೆಯ ಮನೆಯವೊಳ ಪೊಗಲು| ಅವಳೆದ್ದು
ಕೋಣನ ಕಾಲಮುರಿದಿಹಳು || 25 ||
ಹೇಮಕೂಟದ ತುದಿಗೆ ಆ ಮಹಾ ಗಜವೇರಿ
ಸೋಮನ ಕಳೆಯ ಸವಿದುಂಡು | ಮದವೇರಿ
ಕಾಮನ ಪಿಡಿದು ಬಡಿಯಿತ್ತು || 26 ||
ಪಶ್ಚಿಮ ಕೊಳದಲ್ಲಿ ಅಚ್ಚ ತಾವರೆ ಅರಳಿ
ನಿಶ್ಚಳದ ಗಂಧವೆಸೆಯಲು| ಅದಕಂಡು
ಸಚ್ಚಿತ್ತದ ಭ್ರಮರ ಎರಗಿತ್ತು || 27 ||
ನವಪುರದೊಳಗೊಂದು ನವರತ್ನ ಬೆಲೆಯಾಗೆ
ನವನಾರಿಯರು ಅದಕಂಡು | ಕೊಳಲಿಕ್ಕೆ
ಭವಸೂತ್ರ ಹರಿದು ಬಯಲಾದೆ || 28 ||
ಬೆಟ್ಟದ ಮೇಲಣ ಕಿಚ್ಚು ಸುಟ್ಟಿತು ಕಾನನವ
ಅಷ್ಟಮೃಗಜಾತಿ ಅಳಿದವು| ಅದಕಂಡು
ಬಟ್ಟಬಯಲೊಳಗೆ ಮೆರೆದೆನು || 29 ||
ಕೊಂಡಕ್ಕೆ ಬೀಳ್ವಂತ ಲಂಡಸ್ತ್ರೀಯಳು ತಾನು
ದಂಡೆಯ ಕುಣಿಕೆ ಸಡಿಲಿಸಿ | ಕೊಂಡದ
ಕೆಂಡದೊಳಾಳಿ ಮುಳುಗಿದಳು || 30 ||
ಕುಂಡಲಿಯ ಸರ್ಪನು ತುಂಡ ಮೇಲಕೆ ತೆಗೆಯ
ಮಂಡಲವು ಮೂರು ಬೆಳಗಾಗೆ | ನಡುವಳ
ಖಂಡಜ್ಯೋತಿಯಲಿ ಬಯಲಾದೆ || 31 ||
ಅಷ್ಟಾವರಣದ ಹಣ್ಣು ಬಟ್ಟ ಬಯಲೊಳಗಿರಲು
ಅಷ್ಟಾಂಗಯೋಗಗಳ ಮಾಡಿ | ಬಳಲುವರಂ
ದೃಷ್ಟಿ ಇಡುವುದನ್ನು ಮರೆವರು || 32 ||
ನೆಲನಿಲ್ಲದ ತೋಟದಲಿ ಎಲೆಯಿಲ್ಲದ ಗಿಡ ಹುಟ್ಟಿ
ಫಲವಿಲ್ಲದ ಹಣ್ಣು ತಳೆದಿರಲು| ಅದ ಕಂಡು
ಮೆಲಲಿಲ್ಲದೆ ಹೋಗಿ ಸವಿದೆನು || 33 ||
ಸಪ್ತಸಾಗರ ಬತ್ತಿ ಹತ್ತು ಹಂಸೆಯು ಸತ್ತು
ಮುತ್ತು ಮಾಣಿಕವು ತಲೆದೋರೆ| ಅದ ಕಂಡು
ಸತ್ತವನು ಎದ್ದು ಕುಣಿದನು || 34 ||
ಹತ್ತು ಸಾಗರದಲ್ಲಿ ಮತ್ತೆ ಸ್ನಾನವ ಮಾಡಿ
ಮತ್ತೊಂದು ತೆರದ ಉಣಿಸುಗಳ | ನಾನುಂಡು
ಕತ್ತಲೆಯಳಿದು ಬೆಳಗಾದೆ || 35 ||
ಕರ್ತೃ ಶ್ರೀಗುರುರಾಯ ಮುತ್ತಿನ ಕವಚವ
ಅರ್ತಿಯಿಂದೆನಗೆ ಅಳವಡಿಸೆ | ಅದರಿಂದ
ಕಿತ್ತೆನು ಮಾಯಾಬಲೆಗಳನು || 36 ||
ನಡೆವೆನು ಲಿಂಗದ ಕೂಡೆ ನುಡಿವನು ಲಿಂಗದವೊಡನೆ
ಎಡವಿಡದೆ ಬಪ್ಪ ವಿಷಯದ | ಭೋಗಂಗಳ
ಕೊಡುವೆನು ಲಿಂಗಮುಖಗಳಿಗೆ || 37 ||
ಒಂಬತ್ತು ಚೌಕದಲಿ ಉಂಬುಡುವ ಮನೆಯನ್ನು
ನಂಬದೆ ಕಡೆಗೆ ತೊಲಗಿಸಿ | ಮುಂದಣ
ಸಂಭ್ರಮದ ಮನೆಗೆ ನಡೆದೆನು || 38 ||
ಗುರುವೆನ್ನ ಕಾಯವು ಹರನೆನ್ನ ಮನವಯ್ಯ
ಪರಮ ಜಂಗಮವೆ ಅನುಭಾವ | ಮುಖವೆನ್ನ
ಇರವೆಲ್ಲ ಲಿಂಗಮಯವಯ್ಯ || 39 ||
ಉಟ್ಟ ಸೀರೆಯ ಸೀಳಿ ತೊಡಿಗೆಯ ಮುರಿದು
ಬಿಟ್ಟೆನು ನಾನು ಬಿಡುಮುಡಿಯ | ಎಲೆ ದೇವ
ಕೊಟ್ಟೆನು ಎನ್ನ ತನುಮನವ || 40 ||
ಷಟ್ಕಮಲದೊಳಗಣ ಷಡ್ವಿಧ ಲಿಂಗಕ್ಕೆ
ಷಡ್ವಿಧೇಂದ್ರಿಯಗಳ ಮುಖಮಾಡಿ | ವಿಷಯಗಳ
ಷಡ್ಭಕ್ತಿಯಿಂದ ಕೊಡುತಿಹೆನು || 41 ||
ಆಧಾರದೊಳಗಣ ಆದಿಯ ಲಿಂಗಕ್ಕೆ
ಮೇದಿನೀ ಫ್ಯಾಣಮುಖಮಾಡಿ | ಗಂಧದ
ಮೋದವ ಕೊಡುವ ನಿಜಭಕ್ತ || 42 ||
ಆರೆಸಳ ಕಮಲದಲಿ ತೋರುವ ಲಿಂಗಕ್ಕೆ
ಸಾರಜಿಹೈಗಳ ಮುಖಮಾಡಿ | ರಸಗಳ
ಪೂರೈಸಿ ಕೊಡುವ ನಿಜ ನಿಷ್ಠ || 43 ||
ಹತ್ತೆಸಳ ಕಮಲದಲಿ ಗೊತ್ತಿನ ಲಿಂಗಕ್ಕೆ
ಮತ್ತೆ ನೇತ್ರಗಳ ಮುಖಮಾಡಿ | ರೂಪಿನ
ತುತ್ತುಗಳ ಕೊಡುವ ಅವಧಾನಿ || 44 ||
ದ್ವಾದಶದಳ ಕಮಲದ ಮೋದದ ಜಂಗಮಕೆ
ಸಾದರದ ತ್ವಕ್ಕ ಮುಖಮಾಡಿ | ಸ್ಪರುಶದ
ಸ್ವಾದವ ಕೊಡುವ ಅನುಭಾವಿ || 45 ||
ಷೋಡಶದಳ ಕಮಲದಲಿ ಆಡುವ ಲಿಂಗಕ್ಕೆ
ಗಾಢದ ಶ್ರೋತ್ರ ಮುಖಮಾಡಿ | ಶಬ್ದವ
ನೀಡಿ ಕೊಡುತಿಹನು ಪರಿಣಾಮಿ || 46 ||
ದ್ವಿದಳತ್ರಿಕೂಟದಲಿ ಹುದುಗಿದ ಲಿಂಗಕ್ಕೆ
ಸದಮಲದ ಹೃದಯ ಮುಖಮಾಡಿ | ತೃಪ್ತಿಯ
ಒದಗಿ ಕೊಡುತಿಹನು ಚದುರೈಕ್ಯ || 47 ||
ಅಂಗದಾಶ್ರಯವಳಿದು ಲಿಂಗದಾಶ್ರಯವುಳಿದು
ಲಿಂಗದೊಳು ಮನವು ಒಡವರದ | ಕಾರಣವು
ಅಂಗಗುಣವೆನಗೆ ಇನಿತಿಲ್ಲ || 48 ||
ಗುರು ನಿಮ್ಮ ಚರಣವ ಮರೆಯನು, ಮರೆದಡೆ
ಪರಿಭವದ ಬಾಧೆ ಬರಲಯ್ಯಾ | ಕಡೆಯಲ್ಲಿ
ದೊರೆ ನರಕದೊಳಗೆ ತುಳಿಯಯ್ಯ || 49 ||
ನಡೆವಲ್ಲಿ ನುಡಿವಲ್ಲಿ ಉಡುವಲ್ಲಿ ಉಂಬಲ್ಲಿ
ಬಿಡೆನಯ್ಯ ನಿಮ್ಮ ಚರಣವ | ಈ ಛಲವ
ಕಡೆ ಮುಟ್ಟಿಸೆನಗೆ ಗುರುರಾಯ || 50 ||
ಘನಗುರುವೆ ನೀನೆನ್ನ ಮನದೋಳೇ ಇರು ಕಂಡ್ಯಾ
ಮನವ ಬಿಟ್ಟಿನಿತು ಅಗಲಿದಡೆ | ನಿಮಗಿನ್ನು
ಅನಘ ಶರಣರ ಅಡಿಯಾಣೆ || 51 ||
ಆವಾವ ಭೋಗಗಳ ಜೀವಭಾವದಿ ನಾನು
ಭಾವಿಸಿ ಪಿಡಿದು ಸವಿದಡೆ | ನರಕದ
ಭಾವಿಯೊಳಗದ್ದಿ ತೆಗೆಯಯ್ಯ || 52 ||
ಗುರು ಕೊಟ್ಟ ಭೋಗವನ್ನು ಗುರುವಿಗೆ ನಾನಿತ್ತು
ಗುರುಮುಖದಿಂದ ಒದಗಿದ | ಶೇಷವನು
ಇರದೆ ನಾನುಂಡು ಸುಖಿಯಾದೆ || 53 ||
ಲಿಂಗವು ಬಂದೆನ್ನ ಅಂಗದೊಳು ನೆಲಸಲು
ಅಂಗವು ಲಿಂಗದೊಳಗಾದೆ | ಕಾರಣವು
ಹಿಂಗಿದವು ಎನ್ನ ಭವಗಳು || 54 ||
ನಾನಾ ಜನ್ಮಗಳೊಳಗೆ ನಾ ತೊಳಲುತಿರಲಾಗಿ
ನೀನೆನಗೆ ಬಂದು ಕೃಪೆಯಾದ | ಕಾರಣವು
ನಾ ನಿನ್ನ ಪಾದದೂಳೆಡವರೆದೆ || 55 ||
ಹಿಂದಣ ಭವಗಳೆಲ್ಲ ಸಂದಿತ್ತು ಇಲ್ಲಿಗೆ
ಮುಂದಿನ್ನು ಎನಗೆ ಭವವಿಲ್ಲ | ಗುರುರಾಯ
ಹೊಂದಿದೆನು ನಿಮ್ಮ ಚರಣದೊಳು || 56 ||
ನಿಮ್ಮ ತೊತ್ತಿನ ತೊತ್ತು ನಿಮ್ಮ ಭೃತ್ಯರ ಭೃತ್ಯೆ
ನಿಮ್ಮಡಿಯ ನಾನು ಮರೆಹೊಕ್ಕೆ | ಘನಗುರುವೆ
ನಿಮ್ಮ ಕೃಪೆಯಿಂದ ಸಲಹಯ್ಯಾ || 57 ||
ಎನ್ನ ಕಾಯವೆ ಗುರು ಎನ್ನ ಪ್ರಾಣವೆ ಲಿಂಗ
ಎನ್ನಂತರಾತ್ಮ ಚರಲಿಂಗ | ವಾಗಲು
ಇನ್ನುಂಟೆ ಎನಗೆ ತನುಮನವು || 58 ||
ಜಯ ನಿತ್ಯ ರೂಪನೆ ಜಯ ಸತ್ಯಸದ್ಗುರುವೆ
ಜಯಭಕ್ತರರಸ ಅಘಹರನೆ | ಮದ್ಗುರುವೆ
ಜಯ ಎನ್ನ ಮನದ ತವನಿಧಿಯ || 59 ||
ನಲ್ಲಳು ನಲ್ಲನ ಸುಖವ ಎಲ್ಲರಿಗೆ ಅರುಹುವಳೆ ?
ಬಲ್ಲಡೆ ಅದರ ತೆರನಂತೆ| ಲಿಂಗಸುಖ
ಬಲ್ಲವರು ಪರರಿಗುಸುರುವರೆ || 60 ||
ಚಿನ್ನ ಬಣ್ಣಗಳಂತೆ ರನ್ನ ದೀಪ್ತಿಗಳಂತೆ
ಭಿನ್ನವಿಲ್ಲದೆ ಬೆರೆದಿಹರು | ಲಿಂಗದೊಳು
ಪನ್ನಗಧರನ ಶರಣರು || 61 ||
ಎಲ್ಲ ಭೋಗಂಗಳಲಿ ಪಲ್ಲಯಿಸಿ ಇರುವವರು
ಬಲ್ಲಡೆ ಅವರ ಪರಿಬೇರೆ |
ಶರಣರ ಖುಲ್ಲ ಮಾನವರು ಜರಿವರು || 62 ||
ಭಕ್ತರ ತೊತ್ತಾಗಿ ಇರಿಸೆನ್ನ
ಭಕ್ತರುಂಡುಳಿದ ವರಶೇಷ | ಗಳಕೊಂಬ
ನಿತ್ಯ ಸುಖವೆನಗೆ ಕೊಡು ಗುರುವೆ || 63 ||
ಎನ್ನವಗುಣಗಳ ಇನ್ನು ನೋಡದೆ ಗುರು
ಚನ್ನಮಲ್ಲೇಶ ಕೃಪೆಗೈದ | ಕಾರಣ
ಎನ್ನ ಪರಿಭವವು ಪರಿಯಿತ್ತು || 64 ||
ಬಲ್ಲವರೆ ಬಲ್ಲರು ಎಲ್ಲರಿಗೆ ತಿಳಿಯದು
ಕಲ್ಲೋಳಗೆ ಅನಲ ಇರುವಂತೆ | ಇದರನುವ
ಬಲ್ಲವರಿಗರ್ಥ ತಿಳಿವುದು || 65 ||
ಯೋಗಾಂಗ ತ್ರಿವಿಧಿಯ ರಾಗದಿಂ ಬರೆದೋದಿ
ರೋಗ ಭವಬಾಧೆ ಪರಿವುದು | ಲಿಂಗದೊಳ
ಗಾಗಿ ಸುಖದಿಂದ ಮೆರೆವರು || 66 ||
ಗುರುಚನ್ನಮಲ್ಲನ ವರಕೃಪಾರಸವೆನ್ನ
ಶರೀರವ ತುಂಬಿ ಹೊರಸೂಸೆ | ಅದರಿಂದ
ಬರೆದೆನು ಬಲ್ಲ ಪರಿಯಲ್ಲಿ || 67 ||
ಮಂಗಳಾರತಿ
ಕಂಗಳ ನೋಟವು ಕಾಯದ ಕರದಲಿ
ಲಿಂಗದ ಕೂಟವು ಶಿವ ಶಿವ ಚೆಲುವನು
ಮಂಗಳ ಮೂರುತಿ ಮಲೆಗಳ ದೇವಂಗೆತ್ತುವೆ
ನಾರತಿಯ, ಬೆಳಗುವೆನಾರತಿಯ ||ಪ||
ಜಗವಂದ್ಯಗೆ ಬೇಟವ ಮಾಡಿದೆ ನಾ
ಹಗೆಯಾದೆನು ಸಂಸಾರಕ್ಕೆಲ್ಲಾ
ನಗುತೈದರೆ ಲಜ್ಜೆಯ (ನಾಚಿಕೆಯನು) ತೊರೆದವಳೆಂದೆನ್ನ|
ಗಗನ ಗಿರಿಯ ಮೇಲಿರ್ದಹನೆಂದಡೆ
ಲಗುನೆಯಾಗಿ ನಾನರಸುತ ಬಂದೆನು
ಅಘಹರ ಕರುಣಿಸು ನಿಮಗಾನೊಲಿದೆನು
ಮಿಗೆ ಒಲಿದಾರತಿಯ || 1 ||
ಭಕುತಿ- ರತಿಯ ಸಂಭಾಷಣೆಯಿಂದವೆ
ಮುಕುತಿಯ ಮರೆದೆನು, ಕಾಯದ, ಜೀವದ
ಪ್ರಕೃತಿಯ ತೊರೆದೆನು ಸುತ್ತಿದ ಮಾಯಾಪಾಶವ ಹರಿದೆನಲಾ|
ಸುಕೃತಿಯಾಯ್ತು ನಿಮ್ಮಯ ನೆನಹಿಂದವೆ
ಮುಕುತಿಯ ಫಲಗಳ ದಾಂಟಿಯ ಬಂದೆನು
ಶಕುತಿಯಾದನಾಪ್ರಾಣಲಿಂಗಕೆ
ಮನವೊಲಿದಾರತಿಯ || 2 ||
ಮೆಚ್ಚಿ ಒಲಿದು ಮನವಗಲದ ಭಾವವು
ಬಿಚ್ಚದೆ ಬೇರೆಂದೆನಿಸದ ಪ್ರಾಣವು
ಬೆಚ್ಚಂತಿರ್ದುದು ಅಚ್ಚೊತ್ತಿದ ಮಹಾಘನ ತಾ ನೆಲೆಗೊಂಡು
ಪಶ್ಚಿಮ ಮುಖದಲಿ ಬೆಳಗುಪ್ರಕಾಶವು
ನಿಚ್ಚನಿರಂಜನ ಚನ್ನ ಮಲ್ಲಿಕಾರ್ಜುನ
ದೇವಂಗೆತ್ತುವೆನಾರತಿಯಾ ಮನವೊಲಿದಾರತಿಯಾ || 3 ||

Comments
Post a Comment