ಆಕಾಶವ ನೂಕುತ್ತಿಯ ಹಾಗೆ ಅಟಗೋಲ ಹಂಗುಂಟೆ ? ಹಡಪದ ಅಪ್ಪಣ್ಣನವರ ವಚನದ ಭಾವಾರ್ಥ ವಿಶ್ಲೇಷಣೆ-; ಲೋಕೇಶ್ ಎನ್ ಮಾನ್ವಿ.
ಓಂ ಶ್ರೀಗುರುಬಸವಲಿಂಗಾಯ ನಮಃ
ಆಕಾಶವ ನೂಕುತ್ತಿಯ ಹಾಗೆ ಅಟಗೋಲ ಹಂಗುಂಟೆ ?
ಏಕ ಮನವ ನಿಲಿಸುವರೆ, ಬೇರೊಂದು ಸಾಕಾರ ಉಂಟೆ ?
ಬೇಕು ಬೇಡೆಂಬವೆರಡಳಿದವಂಗೆ, ಇಹಲೋಕದ ಹಂಗುಂಟೆ ?
ಈ ಜೋಕೆ ನಿಮ್ಮೊಳು ಏಕವಾಗಿಹ ಶರಣಂಗಲ್ಲದೆ, ಲೋಕದ ಮಾನವರಿಗುಂಟೆ?
ನಿಮ್ಮ ನೆಲೆಯನರಿವುದು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
✍🏾-; ನಿಜಸುಖಿ ಹಡಪದ ಅಪ್ಪಣ್ಣನವರು.
ಭಾವಾರ್ಥ-
ಆಕಾಶವ ನೂಕುತ್ತಿಯ ಹಾಗೆ ಅಟಗೋಲ ಹಂಗುಂಟೆ ?
ಈ ಭೂಮಿಯ ಮೇಲಿಹ ಕೆರೆ, ಹೊಳೆ, ನದಿ ದಾಂಟಲು ಅರಗೋಲುಗಳ ಅವಶ್ಯಕತೆ ಇದೆಯೇ ಹೊರತು,
ಆಕಾಶದ ಮೋಡದಲ್ಲಿಹ ಮೇಘಜಲವನ್ನು ದಾಂಟಲು ಯಾವ ಅರಗೋಲಿನ ಅವಶ್ಯಕತೆಯ ಹಂಗಿಲ್ಲ.
ಏಕ ಮನವ ನಿಲಿಸುವರೆ, ಬೇರೊಂದು ಸಾಕಾರ ಉಂಟೆ ?
ಮರೆವು ಅಳಿದು, ಅರಿವಿನ ಕಣ್ತೆರೆದು, ಪಂಚೇಂದ್ರಿಯಗಳೆಲ್ಲ ಜ್ಞಾನೇಂದ್ರಿಯಗಳಾಗಿ ತನ್ನ ಮನಸ್ಸನ್ನು ನಿರಾಕಾರ ಸೃಷ್ಟಿಕರ್ತನ ಬಯಲಲ್ಲಿರಿಸಿದ ಶಿವಶರಣರಿಗೆ ಯಾವುದೇ (ಮನುಜ ಕಲ್ಪಿತ) ಸಾಕಾರದ ಹಂಗಿಲ್ಲ ಅವಶ್ಯಕತೆಯೂ ಇಲ್ಲ.
ಬೇಕು ಬೇಡೆಂಬವೆರಡಳಿದವಂಗೆ, ಇಹಲೋಕದ ಹಂಗುಂಟೆ ?
ಬೇಕು ಬೇಡಗಳಿಂದಾಚೆ, ಆಸೆ ಆಮಿಷಗಳಿಂದಾಚೆ, ನಾನು ನನ್ನದೆಂಬ ಭ್ರಮೆಯಿಂದಾಚೆ, ನನ್ನದು ತನ್ನದೆಂಬ ಮೋಹದಿಂದಾಚೆಗೆ ಇರುವ ಶಿವಶರಣರಿಗೆ ಯಾವುದೇ ಈ ಲೋಕದ ಹಂಗಿಲ್ಲ..
ಈ ಜೋಕೆ ನಿಮ್ಮೊಳು ಏಕವಾಗಿಹ ಶರಣಂಗಲ್ಲದೆ, ಲೋಕದ ಮಾನವರಿಗುಂಟೆ? ನಿಮ್ಮ ನೆಲೆಯನರಿವುದು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
ಇಂತೀ ತನ್ನ ತಾನರಿದು ನಿಮ್ಮೊಳಗೆ ಏಕವಾಗಿ ಬೆರಸಿ ಬೇರಿಲ್ಲದಂತಿಪ್ಪ ಶಿವ ಶರಣರಿಗಲ್ಲದೆ , ಬಸವಪ್ರಿಯ ಕೂಡಲಚೆನ್ನಬಸವಣ್ಣನ ನಿಲುವನರಿಯಲು ಈ ಲೋಕದ ಮರುಳ ಮಾನವರಿಗೆ ಎಂದೂ ಸಾಧ್ಯವಾಗುವುದಿಲ್ಲ ಎನ್ನುತ್ತಾರೆ ನಿಜಸುಖಿ ಹಡಪದ ಅಪ್ಪಣ್ಣನವರು.💐
ಶರಣು ಶರಣಾರ್ಥಿಗಳೊಂದಿಗೆ
✍🏾ಲೋಕೇಶ್_ಎನ್_ಮಾನ್ವಿ.
9972536176
Comments
Post a Comment