ಯುಗ ಜುಗ ಪ್ರಳಯವಹಂದೂ ಕಾಣೆನಿಂದೂ ಕಾಣೆ ! ಧಗಿಲು ಭುಗಿಲು ಎಂದುರಿವಂದೂ ಕಾಣೆನಿಂದೂ ಕಾಣೆ ! ವಿಶ್ವಗುರು ಬಸವಣ್ಣನವರ ವಚನದ ವಿಶ್ಲೇಷಣೆ- ಲೋಕೇಶ್ ಎನ್ ಮಾನ್ವಿ.
ಓಂ ಶ್ರೀಗುರು ಬಸವಲಿಂಗಾಯ
ಯುಗ ಜುಗ ಪ್ರಳಯವಹಂದೂ ಕಾಣೆನಿಂದೂ ಕಾಣೆ !
ಧಗಿಲು ಭುಗಿಲು ಎಂದುರಿವಂದೂ ಕಾಣೆನಿಂದೂ ಕಾಣೆ !
ಕೂಡಲಸಂಗಮದೇವನಲ್ಲದೆ ತಲೆದೋರುವ ದೈವಂಗಳನಂದೂ ಕಾಣೆನಿಂದೂ ಕಾಣೆ.
✍🏾-:ವಿಶ್ವಗುರು ಬಸವಣ್ಣನವರು.🙏🏻
#ಭಾವಾರ್ಥ-:
ಯುಗ ಜುಗ ಪ್ರಳಯವಹಂದೂ ಕಾಣೆನಿಂದೂ ಕಾಣೆ !
ಯುಗ ಯುಗಗಳೇ ಲಯವಾದ ಕಾಲದಲ್ಲೂ, ರಾಜಾದಿ ರಾಜರೂ ಮಡಿದರು, ಕೋಟೆಕಟ್ಟಿ ಮೆರೆದವರು ಅಳಿದರು, ಕಾಲದಿ ಕಾಲದಿಂದಲೂ ಅವರವರ ಸಂಸ್ಕೃತಿಗಳು ಬದಲಾಗುತ್ತಿವೆ, ಒಬ್ಬರು ಮತ್ತೊಬ್ಬರ ಸಂಸ್ಕೃತಿಯ ಮೇಲೆ ದಾಳಿ ಮಾಡುತ್ತಲೇ ಇದ್ದಾರೆ, ಮನುಷ್ಯನು ತನ್ನ ಕಲ್ಪನೆಗೆ ಅನುಗುಣವಾಗಿ ದೇವರನ್ನು ಭಿನ್ನ-ವಿಭಿನ್ನವಾಗಿ ಚಿತ್ರಿಸುತ್ತಿದ್ದಾನೆ, ಮತ್ತೊಬ್ಬ ರಾಜ, ಆ ಪ್ರದೇಶವನ್ನು ಆಕ್ರಮಿಸಿಕೊಂಡಾಗ, ತನ್ನ ಚಿಂತನೆಯಂತೆ ಮತ್ತೆ ದೇವರ ರೂಪವನ್ನೇ ಬದಲಾಯಿಸುತ್ತಿದ್ದಾನೆ, ಆದರೆ ಪ್ರಕೃತಿ ವಿಕೋಪವಾಗಿ ದೇಗುಲವೇ ಮುಳುಗಿದರೂ ಮನುಜ ಕಲ್ಪಿತ ರೂಪಗಳಿಗೆ ಜೀವ ಬರಲಿಲ್ಲ.
ರಾಜ್ಯಗಳು ಅಳಿದರೂ, ಸಾವಿರಾರು ಜನರು ಮಡಿದರೂ, ಮನುಜ ಕಲ್ಪಿತ ರೂಪಗಳು ಕಣ್ಣು ಬಿಡಲಿಲ್ಲ.
#ಧಗಿಲು ಭುಗಿಲು ಎಂದುರಿವಂದೂ ಕಾಣೆನಿಂದೂ ಕಾಣೆ !
ಮನುಷ್ಯನು ಏನು ತೋಚದಂತೆ, ಧಿಗಿಲು ಬಡಿದು ಸ್ಥಬ್ದವಾಗಿ ನಿಂತಾಗಲು, ಭುಗಿಲು ಆತಂಕ ಮುಗಿಲು ಮುಟ್ಟಿದರೂ ನಾವು ಮಾಡಿದ ದೇವರ ರೂಪಗಳು ಕಣ್ಣು ಬಿಡಲಿಲ್ಲ, ಎದ್ದು ಬರಲಿಲ್ಲ,
ಕಾರಣ ಅದನ್ನು ನಿರ್ಮಿಸಿದ್ದು ಮಾನವ, ವಾಸ್ತವ ಎಂದರೆ ಅದೊಂದು ಬರಿಯ ಮನುಜ ಕಲ್ಪಿಸಿದ ಸುಂದರ ವಸ್ತು ಮಾತ್ರ. ಆದರೆ ಸೃಷ್ಟಿಯ ಮೂಲವೇ ಬೇರಿದೆ.
ಕೂಡಲಸಂಗಮದೇವನಲ್ಲದೆ ತಲೆದೋರುವ ದೈವಂಗಳನಂದೂ ಕಾಣೆನಿಂದೂ ಕಾಣೆ !
ಅದರ ಮೂಲ ರೂಪವು ನಿರೂಪ, ಅದರ ಆಕಾರವೇ ನಿರಾಕಾರ, ಅದರ ಗೋಚರತೆ ಅಗಮ್ಯ ಮತ್ತು ಅಗೋಚರ,ಅದರ ವ್ಯಾಪ್ತಿ ಶಕ್ತಿ,ಅಪ್ರತಿಮ ಅಪ್ರಮಾಣ,ಅದನ್ನು ಕೇವಲ ಒಂದು ನಿರ್ದಿಷ್ಟ ಸ್ಥಳದಲ್ಲಿ ಹಿಡಿದಿಡಲಾಗದು, ಅದನ್ನು ಕಲ್ಪಿಸಿಕೊಳ್ಳಲೂ ಆಗದ, ಅಗಮ್ಯ ಅಗೋಚರ ಅಪ್ರತಿಮ ಅಪ್ರಮಾಣ ಸ್ವಯಂ ಚೈತನ್ಯವದು, ಸೃಷ್ಟಿಯ ಕಣಕಣದಲ್ಲೂ ತುಂಬಿದ ನಿಸ್ಸೀಮ ಚೆಲುವದು, ಅಂಗದೊಳಗೆ ಸ್ವಯಂ ಆತ್ಮಜ್ಯೋತಿಯದು, ಬಯಲ ಮಹಾ ಬಯಲದು,
ಜಗವೆಲ್ಲದರ ಸಕಲ ವಿಸ್ತಾರದ ರುಹದು, ‘ಕೂಡಲ ಸಂಗಮದೇವನೆಂಬ’ ಸೃಷ್ಠಿ-ಸ್ಥಿತಿ-ಲಯ ಕಾರಣವಾದ ಪ್ರಕೃತಿಯ ಮೂಲವೇ ಬಯಲು ಮಹಾಬಯಲು, ಇಂತಪ್ಪ ಆ ಮಹಾನ್ ಶಕ್ತಿ, ನಿರಾಕಾರ ಚೈತನ್ಯವಲ್ಲದೇ ಇಲ್ಲಿ ಮನುಜ ಕಲ್ಪಿತ ವಸ್ತು ವಿಷಯಂಗಳ್ಯಾವೂ ಕೂಡ ಈ ಪ್ರಕೃತಿಯ ಸೃಷ್ಟಿಯಲ್ಲಿ ಸ್ಥಿರವಲ್ಲ,
ಜನನಮರಣ ರಹಿತನು, ನಿತ್ಯನೂ, ನಿರಂತರನೂ, ಸತ್ಯನೂ, ಶಾಶ್ವತನೂ, ಆದ ನಿರಾಕಾರ ಬಯಲ ಕೂಡಲಸಂಗಮದೇವನಲ್ಲದೆ, ಇಲ್ಲಿ ಏನೂ ಶಾಶ್ವತವಲ್ಲ, ಯಾವುದೂ ಶಾಶ್ವತವಲ್ಲ,
ಅಂದು, ಇಂದು, ಮುಂದು, ಎಂದೂ ಎಂದೆದೂ ಕೂಡಲಸಂಗನಲ್ಲದೆ ಮತ್ತ್ಯಾವ ದೈವವೂ ನಿಮ್ಮ ಆಪತ್ಕಾಲಕ್ಕೆ ಬಂದಿಲ್ಲ, ಬರುವುದೂ ಇಲ್ಲ, ಈ ಜಗತ್ತಿಗೆ ಸರ್ವ ಕರ್ತೃವಾದ ದೇವನು ಒಬ್ಬನೇ ಎಂಬುದಾಗಿದೆ, ವಿಶ್ವಗುರು ಬಸವಣ್ಣನವರ ವಚನದ ಭಾವಾರ್ಥ..
🙏🏻ಶರಣು ಶರಣಾರ್ಥಿಗಳೊಂದಿಗೆ🙏🏻
✍🏾ವಿಶ್ಲೇಷಣೆ-;ಲೋಕೇಶ್ ಎನ್ ಮಾನ್ವಿ.
Comments
Post a Comment