ಯುವ ಕಣ್ಮಣಿ Youth icon ಚಿನ್ಮಯಜ್ಞಾನಿ ಚೆನ್ನಬಸವಣ್ಣನವರ ಬಗ್ಗೆ ನಾವು ತಿಳಿದುಕೊಳ್ಳಲೇಬೇಕಾದ ಸಂಗತಿಗಳು,.

ಓಂ ಶ್ರೀಗುರುಬಸವಲಿಂಗಾಯ ನಮಃ. 

‘ಯುವ ಕಣ್ಮಣಿ Youth Icon ಚಿನ್ಮಯಜ್ಞಾನಿ ಚೆನ್ನಬಸವಣ್ಣನವರು’



ಯಾರ ಹೆಸರು ಕೇಳಿದರೆ ಎನ್ನ ಕಿವಿ ನಿಮಿರುವುದೊ,
ಯಾರ ಹೆಸರು ಕೇಳಿದರೆ ಮೈ ಮೇಲಿನ ರೋಮ ರೋಮವು ಎದ್ದೇಳ್ವವೊ,
ಅವರೇ, ಅವರೇ… ನನ್ನ ಹೀರೋ, ಚಿನ್ಮಯಜ್ಞಾನಿ, ಅವಿರಳಜ್ಞಾನಿ, ದ್ವಿತೀಯ ಶೂನ್ಯಸಿಂಹಾಸನಾಧೀಶ್ವರ ಷಟಸ್ಥಲಚಕ್ರವರ್ತಿ ಉಳವಿಯ ಚೆನ್ನಬಸವಣ್ಣನವರು.

ಇವರು ಜೀವಿಸಿದ ಜೀವಿತಾವಧಿ ಅತ್ಯಂತ ಕಡಿಮೆ, ಕೇವಲ ೨೪ವರ್ಷ ಮಾತ್ರ.
ಆದರೆ ಇವರು ಬದುಕಿದ ಜೀವನ ಇದೆಯಲ್ಲಾ ಅದು ಯುಗಯುಗಗಳೇ ಕಳೆದರೂ, ಸೂರ್ಯಚಂದ್ರಾದಿಗಳೇ ಅಳಿದರೂ, ಸೃಷ್ಠಿಸಮಷ್ಠಿಯ ಅಂತ್ಯಕಾಲಕ್ಕೂ ನಿಲುಕದ ಮಹಾನ್ ವ್ಯಕ್ತಿತ್ವವದು, 
ಹೌದು, ಇವರು ಕಲ್ಯಾಣಕ್ರಾಂತಿ ಪುರುಷ ಭಕ್ತಿಭಂಡಾರಿ ಅಣ್ಣಾ ಬಸವಣ್ಣನವರ ಸೋದರ ಅಳಿಯ,
ಅಕ್ಕನಾಗಲಾಂಬಿಕೆ ಮತ್ತು ಶಿವದೇವಯ್ಯನವರ ಕಾರುಣ್ಯದ ಕಂದ, ತಾಯಿಯ ಗರ್ಭದಲ್ಲಿರುವಾಗಲೇ ಬಸವಣ್ಣನವರಿಂದ ಇಷ್ಟಲಿಂಗ ದೀಕ್ಷೆಯನ್ನು ಪಡೆದವರು ಚೆನ್ನಬಸವಣ್ಣನವರು.
ಜನಿಸುತ್ತಲೇ ಶಿವತೇಜಸ್ಸು, ಸೂರ್ಯನ ಪ್ರಕಾಶ, ಚಂದ್ರನಂತೆ ಬೆಳದಿಂಗಳ ಕಂಗಳು, ಮುದ್ದು ಮುಖ, ಅಚಾರ ವಿಚಾರದಲ್ಲಿ  ಅಪ್ರತಿಮ ಜ್ಞಾನಿ ಎನ್ನಪ್ಪ ಚೆನ್ನಬಸವಣ್ಣನ ಕುರಿತ ಬಸವಣ್ಣನವರು ಹೀಗೆ ಹೇಳುತ್ತಾರೆ,

ಬಿತ್ತದೆ ಬೆಳೆಯದೆ ಬೆಳೆದ ಹೆಬ್ಬೆಳಸಿನ ರಾಶಿಯ ನೋಡಾ,
ಸುಗಂಧ ಬಂಧುರದಂತೆ ಹುಟ್ಟುತ್ತವೆ ಪರಿಮಳ !
ಆದಿ ಅನಾದಿಯಿಲ್ಲದ ಮುನ್ನ ತನ್ನಿಂದವೆ ತಾನಾಗಿರ್ದ ಕಾರಣ
ಮುಟ್ಟದೆ ತಟ್ಟದೆ ಗುರುಕಾರುಣ್ಯವ ಪಡೆದು, ಲಿಂಗ ಸಯವಾಗಿ,
ಎನಗೆ ಗತಿಪಥವ ತೋರಿಸಬೇಕೆಂದು ಆಗಾದನು,
ಕೂಡಲಸಂಗಮದೇವರಲ್ಲಿ ಚೆನ್ನಬಸವಣ್ಣನು.

 ಹಾಗಾಗಿ ಚೆನ್ನಬಸವಣ್ಣನವರ ಬಗ್ಗೆ ಸುವರ್ಣಾಕ್ಷರಗಳಲ್ಲಿ ಬರೆದರೂ ಅದು ಎಕಷ್ಚಿತ್ ಕಿಂಚಿತ್ ಎನಿಸಿಬಿಡಬಹುದು,


ಏಕೆಂದರೆ ಇವರ ಪ್ರಾಯ ಚಿಕ್ಕದಾದರೂ,
ಅಭಿಪ್ರಾಯ ಚಿಕ್ಕದಾಗಿರಲಿಲ್ಲ.

ಇದನ್ನು ಅರಿತ ಅಲ್ಲಮಪ್ರಭುದೇವರು,
೫೦ ವರ್ಷ ಪ್ರಾಯದ ಶಿವಯೋಗಿ ಸಿದ್ಧರಾಮೇಶ್ವರಿಗೆ ೧೨ವರ್ಷದ ತರುಣರಾದ ಚೆನ್ನಬಸವಣ್ಣನವರೇ ಇಷ್ಟಲಿಂಗ ದೀಕ್ಷೆ ನೀಡಬೇಕೆಂದು ಸೂಚಿಸಿದ ಅಲ್ಲಮಪ್ರಭುದೇವರು,
೧೨ವರ್ಷ ಪ್ರಾಯದ ಚೆನ್ನಬಸವಣ್ಣನವರ ವ್ಯಕ್ತಿತ್ವ ಹಾಗೂ ಜ್ಞಾನೋನ್ನತಿಯ ಸ್ಥಿತಿಯನ್ನು ಹೀಗೆ ಬಣ್ಣಿಸಿದ್ದಾರೆ.

ಕಿರಿಯರಾದಡೇನು ? ಹಿರಿಯರಾದಡೇನು ?
ಅರಿವಿಂಗೆ ಹಿರಿದು ಕಿರಿದುಂಟೆ ?
ಆದಿ ಅನಾದಿ ಇಲ್ಲದಂದು,
ಅಜಾಂಡ ಬ್ರಹ್ಮಾಂಡ ಕೋಟಿಗಳುದಯವಾಗದಂದು
ಗುಹೇಶ್ವರಲಿಂಗದಲ್ಲಿ ನೀನೊಬ್ಬನೆ ಮಹಾಜ್ಞಾನಿ ಎಂಬುದು
ಕಾಣಬಂದಿತ್ತು ಕಾಣಾ ಚೆನ್ನಬಸವಣ್ಣಾ.
———————————————————-
ಅಯ್ಯ ತತ್ತ್ವ ವಿತತ್ತ್ವಗಳಿಲ್ಲದಂದು, ಪ್ರಕೃತಿ ಪುರುಷರಿಲ್ಲದಂದು,
ಜೀವ_ಪರಮರೆಂಬ ಭಾವ ತಲೆದೋರದಂದು, ಏನೂ ಏನೂ ಇಲ್ಲದಂದು
ಬಯಲು ಬಲಿದು ಒಂದು ಬಿಂದುವಾಯಿತ್ತು ನೋಡಾ.
ಆ ಬಿಂದು ಅಕ್ಷರತ್ರಯದ ಗದ್ದುಗೆಯಲ್ಲಿ ಕುಳ್ಳಿರಲು
 ಓಂಕಾರ ಉತ್ಪತ್ತಿಯಾಯಿತ್ತು.
ಆ [ಓಂಕಾರದ] ನಾದದಲ್ಲಿ ಮೂರ್ತಿಗೊಂಡನೊಬ್ಬ ಶರಣ.
ಆ ಶರಣನಿಂದಾಯಿತ್ತು ಪ್ರಕೃತಿ, ಆ ಪ್ರಕೃತಿಯಿಂದಾಯಿತ್ತು ಲೋಕ.
 ಈ ಲೋಕ ಲೌಕಿಕವನತಿಗಳೆದು ನಿಜದಲ್ಲಿ ನಿವಾಸಿಯಾಗಿಪ್ಪ,
ಗುಹೇಶ್ವರನ ಶರಣ ಚೆನ್ನಬಸವಣ್ಣನ ಘನವನು
ಬಸವಣ್ಣನ ಕೃಪೆಯಿಂದಲರಿದು ನಮೋ ನಮೋ ಎನುತಿರ್ದೆನು.
———————————————————-
ಪ್ರಕೃತಿಗುಣವುಳ್ಳನ್ನಕ್ಕರ ಭಕ್ತನಲ್ಲ.
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ ಉಳ್ಳನ್ನಕ್ಕರ ಶರಣನಲ್ಲ.
ಹಸಿವು ತೃಷೆ ನಿದ್ರೆ ವಿಷಯ ಉಳ್ಳನ್ನಕ್ಕರ ಪ್ರಸಾದಿಯಲ್ಲ.
ಆಚಾರದಲ್ಲಿ ಅನುಭಾವಿ ಪ್ರಸಾದದಲ್ಲಿ ಪರಿಣಾಮಿ,
ಗುಹೇಶ್ವರಲಿಂಗದಲ್ಲಿ ಚೆನ್ನಬಸವಣ್ಣನೆಂಬ ಪ್ರಸಾದಿಗೆ
ನಮೋ ನಮೋ ಎಂಬೆನು.
_______________________________________
ಪ್ರಸಾದಿಗಳು ಪ್ರಸಾದಿಗಳು ಎಂದೆಂಬಿರಿ
ಅಂದು ಇಂದು ಎಂದೂ, ಚೆನ್ನಬಸವಣ್ಣನೊಬ್ಬನೆ ಪ್ರಸಾದಿ.
ಆದಿ ಅನಾದಿ ಇಲ್ಲದಂದು, ಚೆನ್ನಬಸವಣ್ಣನೊಬ್ಬನೆ ಪ್ರಸಾದಿ.
ವೇದಶಾಸ್ತ್ರಂಗಳಿಲ್ಲದಂದು, ಚೆನ್ನಬಸವಣ್ಣನೊಬ್ಬನೆ ಪ್ರಸಾದಿ.

ಅಜಾಂಡ ಬ್ರಹ್ಮಾಂಡ ಕೋಟಿಗಳುದಯವಾಗದಂದು
ಚೆನ್ನಬಸವಣ್ಣನೊಬ್ಬನೆ ಪ್ರಸಾದಿ.
ತ್ರೈಮೂರ್ತಿಗಳಿಲ್ಲದಂದು, ಚೆನ್ನಬಸವಣ್ಣನೊಬ್ಬನೆ ಪ್ರಸಾದಿ.
 ಉಮೆಯ ಕಲ್ಯಾಣವಿಲ್ಲದಂದು, ಚೆನ್ನಬಸವಣ್ಣನೊಬ್ಬನೆ ಪ್ರಸಾದಿ.
ಗಂಗೆವಾಳುಕರಿಲ್ಲದಂದು, ಚೆನ್ನಬಸವಣ್ಣನೊಬ್ಬನೇ ಪ್ರಸಾದಿ.
 ಲಿಂಗವೆಂಬ ನಾಮ ಜಂಗಮವೆಂಬ ಹೆಸರಿಲ್ಲದಂದು
ಚೆನ್ನಬಸವಣ್ಣನೊಬ್ಬನೆ ಪ್ರಸಾದಿ.

ಗುಹೇಶ್ವರಾ ನೀನೆ ಲಿಂಗ, ಬಸವಣ್ಣನೆ ಗುರು
ಚೆನ್ನಬಸವಣ್ಣನೊಬ್ಬನೆ ಪ್ರಸಾದಿ.
ಮತ್ತಾರನು ಕಾಣೆನಯ್ಯಾ.
————————————————————-
ಬಸವಣ್ಣಾ ನಿನಗೇಳು ಜನ್ಮ, ನನಗೆ ನಾಲ್ಕು ಜನ್ಮ,
ಚನ್ನಬಸವಣ್ಣಗೊಂದೆ ಜನ್ಮ.
ನೀನು ಗುರುವೆನಿಸಿಕೊಳಬೇಡ,
ನಾನು ಜಂಗಮವೆನಿಸಿಕೊಳಬೇಡ,
ನಾವಿಬ್ಬರು ಚೆನ್ನಬಸವಣ್ಣನ ಒಕ್ಕುಮಿಕ್ಕ ಪ್ರಸಾದವ ಕೊಳ್ಳದಡೆ
ನಮ್ಮ ಗುಹೇಶ್ವರ ಸಾಕ್ಷಿಯಾಗಿ
ಭವಂ ನಾಸ್ತಿಯಾಗದು ಕಾಣಾ ಸಂಗನಬಸವಣ್ಣಾ.
_______________________________________
ಕಾಯವಿಡಿದು ಸುಳಿದಾಡುವನ್ನಕ್ಕ,
ಕರಣಂಗಳ ಮೀರುವರಾರೈ ಚೆನ್ನಬಸವಣ್ಣಾ ?
ಕರಣಂಗಳಿಂದ ಕರ್ಮಂಗಳ ಮಾಡುತ್ತಿದ್ದಿತು.
ಕರ್ಮವ ಕರ್ಮದಿಂದ ಅಳಿದು ಮಲವ ಜಲ ತೊಳೆದಂತೆ,_
ನಾನು ಕಾಯದ ಕರ್ಮ ಮಾಡುವಲ್ಲಿ,
ಜೀವವಿಕಾರ ಬಿಡಿಸಿದೆಯಲ್ಲಾ !
ಗುಹೇಶ್ವರಲಿಂಗಕ್ಕೆ ಒಡಲಿಲ್ಲ ಎಂಬುದನು,
ಅರುಹಿದೆಯಲ್ಲಾ ಚೆನ್ನಬಸವಣ್ಣಾ.
_______________________________________
ಹಸಿದ ಕಾಳೋರಗನ ಹೆಡೆಯ ನೆಳಲಲ್ಲಿ ಕಾಳಂಧನೆಂಬ ಕಪ್ಪೆ !
ಅಂತಹ ಕಾಳೋರಗನ ಏಳ ನುಂಗಿತ್ತು.
ಅದರ ಬೇಳುವೆಯಲ್ಲಿ ಮೇಲಾಗಿ ಬದುಕಿದೆ ಚೆನ್ನಬಸವಣ್ಣನಿಂದ !
ಗುಹೇಶ್ವರಲಿಂಗವೆಂಬುದು ಪ್ರಮಾಣವಾಯಿತ್ತು!
————————————————————
ಅಯ್ಯ ! ಆಗಮಿಕನಲ್ಲಿ ವೇದಪಾಠಕನಲ್ಲ ನೋಡ !
ನಿರವಯಶೂನ್ಯಲಿಂಗಮೂರ್ತಿ
ತರ್ಕನಲ್ಲ ವ್ಯಾಕರಣನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಶಾಸ್ತ್ರಜ್ಞನಲ್ಲ ಪುರಾಣಿಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ವಾದಿಯಲ್ಲ ಉಪನೀತಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಮಾತಿನವನಲ್ಲ ಮಥನದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ನೀತಿಯವನಲ್ಲ ಖ್ಯಾತಿಯವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ರತಿಯವನಲ್ಲ ವಿರತಿಯವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಹೆಣ್ಣು ರೂಪನಲ್ಲ ಗಂಡು ರೂಪನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ನಾಮದವನಲ್ಲ ಸೀಮೆಯವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಆಕ್ರಿಯದವನಲ್ಲ ದುಃಕ್ರಿಯದವನಲ್ಲ ನೋಡ !
ನಿರವಯಶೂನ್ಯಲಿಂಗಮೂರ್ತಿ
ಶ್ವಾನಜ್ಞಾನಿಯಲ್ಲ ಕುಕ್ಕಟಜ್ಞಾನಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಆಶನಿಯಲ್ಲ ವ್ಯಸನಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಇಂತು ಉಭಯ ಭಿನ್ನನಾಮವಳಿದ ಸಂಗನ ಬಸವಣ್ಣನ ಕರ ನಯನ
ಮುಖದಲ್ಲಿ
ಬೆಳಗುವ ಚಿಜ್ಯೋತಿ ತಾನೆ ನೋಡ! ನಿರವಯಶೂನ್ಯಲಿಂಗಮೂರ್ತಿ ಚೆನ್ನಬಸವಣ್ಣನು.
————————————————————
ಆಚಾರವೆ ಸ್ವರೂಪವಾದ ಕುರುಹಿನ ಅಂಗವಿಡಿದು
ಅಂಗ ಅನಂಗವೆಂಬವೆರಡನೂ ಹೊದ್ದದ ಮಹಿಮ
ನೀನು ನೋಡಾ, ಚೆನ್ನಬಸವಣ್ಣಾ !
ಅಂಗವೆ ಆಚಾರವಾಗಿ ಇರಬಲ್ಲೆ
ಆಚಾರವೆ ಅಂಗವಾಗಿ ಇರಬಲ್ಲೆಯಾಗಿ
ಅಂಗವಿಲ್ಲದ ಅಪ್ರತಿಮನು ನೀನು ನೋಡಾ.
ಆಚಾರವೆ ಆಯತ ಆಚಾರವೆ ಸ್ವಾಯತ
ಆಚಾರವೆ ಸನ್ನಿಹಿತ ಆಚಾರವೆ ಪ್ರಾಣವಾಗಿಪ್ಪೆಯಾಗಿ
ಎನ್ನ ಗುಹೇಶ್ವರಲಿಂಗದಲ್ಲಿ ನಿನ್ನ ಆಚಾರ ಭಿಕ್ಷವನಿಕ್ಕು
ಚೆನ್ನಬಸವಣ್ಣಾ.
————————————————————
ರತ್ನದೀಪ್ತಿಯಾದಡೇನು ? ಬಂಧಿಸಿದ ಕುಂದಣದಲ್ಲಿಯೆ ಸಂದಿರಬೇಕು.
ಸ್ವಾದುರಸದ ರುಚಿಯನೀವ ಫಲವೆಂದಡೇನು ವೃಕ್ಷವಿಲ್ಲದನ್ನಕ್ಕರ ?
ಚಿತ್ರಸೌಂದರ್ಯ ನೋಟಕೆ ಸುಖವೆಂದಡೇನು
ಭಿತ್ತಿಯ ಪಟ ಮುಖ್ಯಸ್ಥಾನದಲ್ಲಿಲ್ಲದನ್ನಕ್ಕರ ?
ಅಂಜನ ಸಿದ್ಧಿಯಿಂ ನಿಧಾನವ ಕಂಡಡೇನು
ಸಾಧನ ಕ್ರೀಯಿಂದ ಸಾಧ್ಯವ ಮಾಡಿಕೊಳ್ಳದನ್ನಕ್ಕರ ?
ಇದು ಕಾರಣ_
ಕಾಯದ ಕರಸ್ಥಲಕ್ಕೆ ಇಷ್ಟಲಿಂಗಸಾಹಿತ್ಯವಿಲ್ಲದಿದ್ದಡೆ,
ನಿರವಯವಾದ ಜ್ಞಾನಯೋಗ ಕೂಟ ಸಾಧ್ಯವಾಗದು.
ಇದು ಕಾರಣ_
ಕ್ರಿಯಾಲಿಂಗಸಂಬಂಧವೆ ಭಕ್ತಂಗೆ ಮತವು, ಇದೇ ಕಾರಣ ದೇಹಶೌಚವು !
ನಮ್ಮ ಗುಹೇಶ್ವರನ ಶರಣರ ಮನ ಒಪ್ಪುವಂತೆ
ಸಿದ್ಧರಾಮಯ್ಯಂಗೆ ಲಿಂಗಸಾಹಿತ್ಯವ ಮಾಡಾ ಚೆನ್ನಬಸವಣ್ಣಾ. 
ಸಿದ್ಧರಾಮೇಶ್ವರರಿಗೆ ಗುರುವಾಗಿ ದೀಕ್ಷೆ ಕೊಡುವ ಯೋಗ್ಯತೆ ನಿನಗಲ್ಲದೆ ಮತ್ತಾರಿಗುಂಟು ? ನೀನಲ್ಲವೇ ಸದಮಲಜ್ಞಾನಿ ನೀನೇ ಗುರುವಾಗಿ ಸಿದ್ಧರಾಮನಿಗೆ ದೀಕ್ಷೆಕೊಡು ಎಂದರು ಅಲ್ಲಮರು,
ನಂತರ ಮಹಾನ್ ಶಿವಯೋಗಿ ಎಂದೇ ಪ್ರಖ್ಯಾತರಾದ ೫೦ ವರ್ಷ ಪ್ರಾಯದ ಸಿದ್ಧರಾಮೇಶ್ವರರಿಗೆ,
ಅಲ್ಲಮಪ್ರಭುವಿನ ಆಶೆಯದಂತೆ ೧೨ವರ್ಷ ಪ್ರಾಯದ ತರುಣ ಚೆನ್ನಬಸವಣ್ಣನವರು ಗುರುವಾಗಿ  ಇಷ್ಟಲಿಂಗ ದೀಕ್ಷೆಯನ್ನು ಕೊಟ್ಟರು.

ಆಗ ಗುರು ಚೆನ್ನಬಸವಣ್ಣನವರನ್ನು ಸಿದ್ಧರಾಮೇಶ್ವರರು ತಮ್ಮ ವಚನಗಳಲ್ಲಿ ಹಾಡಿ ಕೊಂಡಾಡಿ ಸ್ತುತಿಸಿದ್ದಾರೆ..


ಆ ಅಕ್ಷರವನು ಆರೈದು ತೋರಿರಿ
ಓರಂತೆ ಎನ್ನ ಸದುಹೃದಯನೆನಿಸಿ
ನಾದ ಕಳೆಗಳನೆನ್ನ ಆಕರದೊಳಗಿಟ್ಟು
ಅಭೇದ್ಯ ಪರಮಾನಂದ ಸತ್ಯರೂಪ ನಿತ್ಯಾನಂದ
ಶ್ರೀ ಗುರು ಚೆನ್ನಬಸವಣ್ಣನುನ್ನತವನಾರು ಬಲ್ಲರು ಹೇಳಾ,
ಕಪಿಲಸಿದ್ಧಮಲ್ಲಿಕಾರ್ಜುನ.
________________________________________
ತ್ರಾಹಿಮಾಂ ಪರಮೇಶ್ವರ ಜಯ
ಭಕ್ತಿಜಾÕನಮಾಕಾರ ನೀನೆಯಯ್ಯ ಚೆನ್ನಬಸವಣ್ಣ.
ಏಕೋದೇವ ದೇವಧರ್ಮ ಧರ್ಮಗುಣ ಗುಣಪ್ರಕಾಶ
ಪ್ರಕಾಶ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
ನಿಮ್ಮಿಂದ ಪ್ರಾಣಂಗಸಂಬಂಧವಾಗಿ
ನಿಮಗೆ ನಮೋ ನಮೋ ಎನುತಿರ್ದೆನಯ್ಯಾ ಚೆನ್ನಬಸವಣ್ಣ.
________________________________________
ಎನ್ನ ಮಸ್ತಕದಲ್ಲಿ ಹಕಾರವಾಗಿದ್ದಾತ ಪ್ರಭುದೇವ.
ಎನ್ನ ಲಲಾಟದಲ್ಲಿ ಓಂಕಾರವಾಗಿದ್ದಾತ ಚೆನ್ನಬಸವ.
ಎನ್ನ ಘ್ರಾಣದಲ್ಲಿ ನಕಾರವಾಗಿದ್ದಾತ ಮಡಿವಾಳಯ್ಯ.
ಎನ್ನ ಬಾಯಿಯಲ್ಲಿ ಮಕಾರವಾಗಿದ್ದಾತ ಮರುಳು ಶಂಕರಯ್ಯ.
ಎನ್ನ ನೇತ್ರದಲ್ಲಿ ಶಿಕಾರವಾಗಿದ್ದಾತ ಬಸವ.
ಎನ್ನ ಕಪೋಲದಲ್ಲಿ ವಕಾರವಾಗಿದ್ದಾತ ಪಡಿಹಾರಿ ಬಸವಯ್ಯ.
ಎನ್ನ ಶ್ರೋತ್ರದಲ್ಲಿ ಯಕಾರವಾಗಿದ್ದಾತ ಹಡಪದಪ್ಪಣ್ಣ.
ಎನ್ನ ಜಿಹ್ವೆಯಲ್ಲಿ ಹ್ರೀಂಕಾರವಾಗಿದ್ದಾಕೆ ಅಕ್ಕನಾಗಮ್ಮ.
ಎನ್ನ ಸರ್ವಾಂಗದಲ್ಲಿ ಸಕಲ ಪ್ರಣವರೂಪಾಗಿದ್ದಾತ
ಗುರುವಿನ ಗುರು ಚೆನ್ನಬಸವ ಪಾದಕ್ಕೆ ನಮೋ ನಮೋ
ಎಂಬೆನಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನಾ.
_______________________________________
ಭಕ್ತಿಸ್ಥಲದ ವರ್ಮವನು
ಲೋಕಕ್ಕೆ ನಿಶ್ಚಿಂತವ ಮಾಡಿ ತೋರಿದ ಬಸವಣ್ಣ.
ತನ್ನ ಪದದುನ್ನತವ ಏಕೈಕಸದ್ಭಾವರಿಗಿತ್ತ
ಎನ್ನ ಗುರು ಚೆನ್ನಬಸವಣ್ಣನು.
ಬಸವ, ಚೆನ್ನಬಸವನೆಂಬ ಮಹಾಸಮುದ್ರದೊಳಗೆ
ಹರುಷಿತನಾದೆನೈ ಕಪಿಲಸಿದ್ಧಮಲ್ಲಿಕಾರ್ಜುನ.
________________________________________
ಇನ್ನು ಹೊಗಳುವೆನಯ್ಯಾ, ಲಿಂಗದ ಕುಲಾವಳಿಯನ್ನೆತ್ತಿ
ಇನ್ನು ಹೊಗಳುವೆನಯ್ಯಾ, ಜಂಗಮದ ಜ್ಞಾನವ ಕಂಡು;
ಇನ್ನು ಹೊಗಳುವೆನಯ್ಯಾ,
ಚೆನ್ನಬಸವಣ್ಣನೆಂಬ ಪರಾತ್ಪರ ಗುರುಮೂರ್ತಿಯ,
ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ.
_______________________________________


ಇನ್ನು ವಿಶ್ವಗುರು ಬಸವಣ್ಣನವರು ಕೂಡ ಚೆನ್ನಬಸವಣ್ಣನವರನ್ನು ಕೊಂಡಾಡಿದ್ದಾರೆ.

ಮತಿಗೆಟ್ಟು ಧೃತಿಗುಂದಿ ಬೇಳಾದೆನಯ್ಯಾ,
ಗತಿಗೆಟ್ಟು ವ್ರತಗೆಟ್ಟು ಧಾತುಗೆಟ್ಟ ಬಾಹಿರ ನಾನಯ್ಯಾ,
ಕಹಿಸೋರೆ ಮುತ್ತಂತಾಯಿತ್ತೆನ್ನ ಭಕ್ತಿ.
ನಡೆಲಿಂಗ ಜಂಗಮ ಮನೆಗೆ ಬರಲು
ಇಂಬುಗೊಳಲರಿಯದೆ ಕೆಟ್ಟ ಕೇಡನೇನೆಂದುಪಮಿಸುವೆನಯ್ಯಾ,
ನವರತ್ನವ ಕಿತ್ತು ಮಡುವಿನೊಳಗೆ ಹಾಯ್ಕಿದ ಕಪಿಯಂತಾಯಿತ್ತೆನ್ನ ಭಕ್ತಿ
 ಕೂಡಲಸಂಗಮದೇವರ ತಂದುಕೊಟ್ಟಡೆ
 ನಿಮ್ಮ ಚಮ್ಮಾವುಗೆಯ ಹೊತ್ತು ಕುಣಿದಾಡುವೆನು 
ಕಾಣಾ, ಚೆನ್ನಬಸವಣ್ಣಾ.
_______________________________________
ಅಯ್ಯಾ, ಎನ್ನ ಕಾಯದಲ್ಲಿ ಮಡಿವಾಳನ ತೋರಿದ,
 ಎನ್ನ ಮನದಲ್ಲಿ ತನ್ನ ನಿಲವ ತೋರಿದ,
ಎನ್ನ ಅರಿವಿನಲ್ಲಿ ನಿಮ್ಮ ತೋರಿದ,
 ಇಂತೀ ತ್ರಿವಿಧಸ್ವಾಯತವನು
ಎನ್ನ ಸರ್ವಾಂಗದಲ್ಲಿ ಪ್ರತಿಷ್ಠಿಸಿ ತೋರಿದ.
ಕೂಡಲಸಂಗಮದೇವಯ್ಯಾ,
ಚೆನ್ನಬಸವಣ್ಣನ ಕರುಣದಿಂದ
 ಮಡಿವಾಳನೆಂಬ ಪರುಷ ಸಾಧ್ಯವಾಯಿತ್ತೆನಗೆ.
_______________________________________
ಸರ್ವಾವಧಾನಿ ಸಮಯಪ್ರಸಾದಿ ನೋಡಯ್ಯಾ,
ಲಿಂಗಾರ್ಪಿತದಲ್ಲಿ ಸರ್ವಾವಧಾನಿ ನೋಡಯ್ಯಾ,
ಅಯ್ಯಾ, ಅನಾಹತಂಗಳ ಮುನ್ನವೆ ಇರಲೀಯ,
ಕೂಡಲಸಂಗಮದೇವರಲ್ಲಿ
ಚೆನ್ನಬಸವಣ್ಣಂಗೆ ನಮೋ ನಮೋ ಎನುತಿರ್ದೆನು.
_______________________________________
ಲೋಕದಿಚ್ಛೆಯ ನಡೆವವನಲ್ಲ, ಲೋಕದಿಚ್ಛೆಯ ನುಡಿವವನಲ್ಲ,
ಲೋಕವಿರಹಿತ ಶರಣ, ಶರಣವಿರಹಿತ ಲೋಕವೆಂಬುದು
ಕಾಣಬಂದಿತ್ತು ನೋಡಾ.
ಲಿಂಗವೆ ಗೂಡಾಗಿ, ಜಂಗಮವೆ ಸ್ವಾಯತವಾಗಿ
ಪ್ರಸಾದವೆ ಪ್ರಾಣವಾಗಿ ಪರಿಣಾಮದಲ್ಲಿ ಇಪ್ಪ ನೋಡಯ್ಯಾ.
ಕೂಡಲಸಂಗಮದೇವಾ, ನಿಮ್ಮ ಶರಣ ಚೆನ್ನಬಸವಣ್ಣಂಗೆ
ನಮೋ ನಮೋ ಎಂಬೆನು.
________________________________________
ನಾನೊಂದು ಕಾರಣ ಮತ್ರ್ಯಕ್ಕೆ ಬಂದೆನು,
ಬಂದ ಬಳಲಿಕೆಯ ಪರಿಹರಿಸಲಿಕ್ಕೆ ಚೆನ್ನಬಸವಣ್ಣ ಬಂದನು,
ಇನ್ನು ಬಾರದಂತೆ ಪ್ರಭುದೇವರು ಬಂದರು,
ಇದಕ್ಕೆ ಆಜ್ಞಾಕರ್ತೃ ಮಡಿವಾಳ ಮಾಚಿತಂದೆ ಬಂದನು.
ನಾನಿನ್ನಾರಿಗಂಜೆನು, ಬದುಕಿದೆನು 
ಕಾಣಾ ಕೂಡಲಸಂಗಮದೇವಾ.
_____________________________________

ಕೃತಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗಂಗಳು
ಭವರಾಟಳದಲ್ಲಿ ತಿರುಗುತ್ತಿಪ್ಪಲ್ಲಿ
ಅನಂತ ಕೋಟ್ಯನುಕೋಟಿ ಯುಗಂಗಳು
ಮಡಿದುಹೋದವು,
ಅನಂತ ಜಲಪ್ರಳಯಂಗಳು
ಸುರಿದು ಹೋದವು.
ಹದಿನಾಲ್ಕು ಲೋಕಂಗಳೆಂಬ ಅನಂತಕೋಟಿ ಬ್ರಹ್ಮಾಂಡಗಳೆಲ್ಲ
ಲಯವಾಗಿ ಹೋದವು.
ಇದರೊಳಗೆ ಆವ ಲೋಕದಲ್ಲಿ ಆವ ಯುಗದಲ್ಲಿ
ಪ್ರಾಣಲಿಂಗ, ಲಿಂಗಪ್ರಾಣವೆಂಬ ಭೇದವನರುಹಿದವರಾರು ಹೇಳಾ
ಗಂಗೆ ಗೌರೀವಲ್ಲಭರು ಮೊದಲಾದ
ಅನಂತಕೋಟಿ ರುದ್ರಾದಿಗಳೆಲ್ಲರೂ
ಪ್ರಾಣಲಿಂಗಸಂಬಂಧದ ಹೊಲಬನರಿಯದೆ
ಅಣಿಮಾದಿ ಚತುರ್ವಿಧ ಫಲಪ್ರಾಪ್ತಿಗೆ ಒಳಗಾದರು.
ಶಿವಾಚಾರದ ವಿಚಾರವನರಿಯದೆ
ಜಗವು ಕೆಟ್ಟುಹೋಹುದೆಂದು
ಪರಮಪುರುಷಾರ್ಥಕಾರಣವಾಗಿ ಮತ್ರ್ಯದಲ್ಲಿ
ಅವತರಿಸಿ,ಗುರುಲಿಂಗಜಂಗಮಪಾದೋದಕಪ್ರಸಾದವೆಂಬ
ಪಂಚಾಚಾರಸ್ಥಲವ ನೆಲೆಗೊಳಿಸಿ,
ಷಡುಸ್ಥಲವೆಂಬ ಮಹಾನುಭಾವಮಂ
ಕರತಳಾಮಳಕವಾಗಿ ಸ್ಥಿತಗೊಳಿಸಿ,
ಪ್ರಾಣಲಿಂಗ, ಲಿಂಗಪ್ರಾಣವೆಂಬ ಭೇದವನೆನಗೆ ತಿಳುಹಿ,
ಎನ್ನ ಭ್ರಾಂತಿಸೂತಕವ ಬಿಡಿಸಿ,
ಲಿಂಗೈಕ್ಯವೆಂಬುದೆನಗೆ ತೋರಿದೆಯಾಗಿ
ನಿನ್ನಿಂದಲಾನು ಸಂಗನಬಸವಣ್ಣನೆಂಬ ಹೆಸರುವಡೆದೆನು.
ಕೂಡಲಸಂಗಮದೇವರು ಸಾಕ್ಷಿಯಾಗಿ
 ಎನಗೆ ನೀನು ಪರಮಾರಾಧ್ಯ ಕಾಣಾ, ಚೆನ್ನಬಸವಣ್ಣಾ.
________________________________________

ಗುರುವಚನವ ತನ್ನೊಳಗಿಂಬಿಟ್ಟುಕೊಂಡ ಪ್ರಸಾದಿಯ ಪ್ರಸಾದಿಯೆಂಬೆ.
ಲಿಂಗವಚನವ ತನ್ನೊಳಗಿಂಬಿಟ್ಟುಕೊಂಡ ಪ್ರಸಾದಿಯ ಪ್ರಸಾದಿಯೆಂಬೆ.
ಜಂಗಮವಚನವ ತನ್ನೊಳಗಿಂಬಿಟ್ಟುಕೊಂಡ ಪ್ರಸಾದಿಯ ಪ್ರಸಾದಿಯೆಂಬೆ,
ಪ್ರಸಾದವಚನವ ತನ್ನೊಳಗಿಂಬಿಟ್ಟುಕೊಂಡ ಪ್ರಸಾದಿಯ ಪ್ರಸಾದಿಯೆಂಬೆ.
ಇಂತೀ ಚತುರ್ವಿಧ ಸಂಪನ್ನ ಕೂಡಲಸಂಗಯ್ಯನಲ್ಲಿ ಚೆನ್ನಬಸವಣ್ಣನು.
_______________________________________
ಅಯ್ಯಾ, ಮರದೊಳಗೆ ಅಗ್ನಿ ಇದ್ದಡೇನಯ್ಯಾ,
ಮಥನಿಸಿ ತೋರುವರಿಲ್ಲದನ್ನಕ್ಕರ ಕಾಣಬಹುದೆ
ಜಗದೊಳಗೆ ಕೂಡೆ ಪರಿಪೂರ್ಣ ಶಿವನೆಂದಡೆ
ಅಂತರಂಗದಲ್ಲಿ ಕಾಣಬಹುದೆ
ಆದಿ ಲಿಂಗ ಅನಾದಿ ಶರಣನ ಭೇದವ ತಿಳುಹಿ,
ನಿಜಪ್ರಾಣದೊಳಗಿಪ್ಪ ಸುಜ್ಞಾನಲಿಂಗವ ಕರಸ್ಥಲಕ್ಕೆ ತಂದು,
ಆ ಕರಸ್ಥಲದ ಲಿಂಗವನೆನ್ನ ಸರ್ವಾಂಗದೊಳಗೆ ಪ್ರತಿಸ್ಥಾಪಿಸಿ ತೋರಿ,
ನಿತ್ಯ ನಿಜಲಿಂಗೈಕ್ಯವಹ ಹೊಲಬಿನ ಹರಿಬ ತೋರಿ,
ಮತ್ರ್ಯಲೋಕದೊಳಗೆಲ್ಲಾ ಇಂದು ಮೊದಲಾಗಿ
ಪ್ರಾಣಲಿಂಗದ ಘನವ ಹರಹಿ ಶಿವಭಕ್ತಿಯನುದ್ಧರಿಸಿದನು.
ಕೂಡಲಸಂಗಮದೇವರಲ್ಲಿ, ಚೆನ್ನಬಸವಣ್ಣನೆನ್ನನಾಗುಮಾಡಿ ಉಳುಹಿದನಾಗಿ
 ಇನ್ನು ಮತ್ರ್ಯಲೋಕಕ್ಕೆ ಬಂದಡೆ ಚೆನ್ನಬಸವಣ್ಣನ ಪಾದದಾಣೆ. ಎಂದು ಚೆನ್ನಬಸವಣ್ಣನವರನ್ನು ಕೊಂಡಾಡಿದ್ದಾರೆ, ಬಸವಣ್ಣನವರು.




ವೀರವಿರಾಗಿಣಿ ಅಕ್ಕಮಹಾದೇವಿಯವರು ಕೂಡ ಚೆನ್ನಬಸವಣ್ಣನವರನ್ನು ಸ್ತುತಿಸಿದ್ದಾರೆ.

ಮರ್ತ್ಯಲೋಕದ ಭಕ್ತರ ಮನವ 
ಬೆಳಗಲೆಂದು ಇಳಿತಂದನಯ್ಯಾ ಶಿವನು 
ಕತ್ತಲೆಯ ಪಾಳೆಯವ ರವಿ ಹೊಕ್ಕಂತಾಯಿತ್ತಯ್ಯಾ. 
ಚಿತ್ತದ ಪ್ರಕೃತಿಯ ಹಿಂಗಿಸಿ, 
ಮುಕ್ತಿಪಥವ ತೋರಿದನೆಲ್ಲ ಅಸಂಖ್ಯಾತ ಗಣಂಗಳಿಗೆ. 
ತನುವೆಲ್ಲ ಸ್ವಯಲಿಂಗ, ಮನವೆಲ್ಲ ಚರಲಿಂಗ. 
ಭಾವವೆಲ್ಲ ಮಹಾಘನದ ಬೆಳಗು. 
ಚೆನ್ನಮಲ್ಲಿಕಾರ್ಜುನಯ್ಯಾ, 
ನಿಮ್ಮ ಶರಣ ಸಮ್ಯಕ್‍ಜ್ಞಾನಿ ಚೆನ್ನಬಸವಣ್ಣನ ಶ್ರೀ ಪಾದಕ್ಕೆ ಶರಣೆಂದು ಎನ್ನ ಭವಂ ನಾಸ್ತಿಯಾಯಿತ್ತಯ್ಯಾ ಪ್ರಭುವೆ. 
_______________________________________
ಬಸವಣ್ಣನೆ ಗುರು, ಪ್ರಭುದೇವರೆ ಲಿಂಗ, 
ಸಿದ್ಧರಾಮಯ್ಯನೆ ಜಂಗಮ, 
ಮಡಿವಾಳಯ್ಯನೆ ಜಂಗಮ, 
ಚೆನ್ನಬಸವಣ್ಣನೆನ್ನ ಪರಮಾರಾಧ್ಯರು. 
ಇನ್ನು ಸುಖಿಯಾದೆನು ಕಾಣಾ ಚೆನ್ನಮಲ್ಲಿಕಾರ್ಜುನಯ್ಯಾ. ಎಂದು ಸ್ತುತಿಸಿದ್ದಾರೆ ಮಹಾದೇವಿಯಕ್ಕನವರು…

ತಮಗೆ ೧೨ ವರ್ಷಗಳಿರುವಾಗಲೇ ೧೨ನೇ ಶತಮಾನದ ಪಾರ್ಲಿಮೆಂಟ್ ಅನುಭವಮಂಟಪದಲ್ಲಿ ಚರ್ಚೆಯಲ್ಲಿ ಭಾಗವಹಿಸಿದವರು,
ನಂತರ  ಪ್ರತಿಯೊಂದು ವಚನಗಳಿಗೆ ಅಂತಿಮವಾಗಿ ಒಪ್ಪಿಗೆಯನ್ನು ಕೊಡುವ ಜವಾಬ್ದಾರಿ ಅವಿರಳಜ್ಞಾನಿ ಚೆನ್ನಬಸವಣ್ಣನವರದ್ದಾಗಿತ್ತು, 

ಕರಣಹಸಿಗೆ ಹಾಗೂ ಷಟಸ್ಥಲ ತತ್ವವನ್ನು ಕಲ್ಯಾಣದ ಸುತ್ತಮುತ್ತಲಿನ ಪ್ರದೇಶಗಳಿಗೆ ಹೋಗಿ ತಿಳಿಪಡಿಸುತ್ತಿದ್ದರು.

ಬಸವಣ್ಣನವರ ತತ್ವಗಳಿಗಾಗಿ ವಿಶ್ವದ ಅನೇಕ ದೇಶ-ವಿದೇಶಗಳಿಂದ ಬಂದು ಕಲ್ಯಾಣದಲ್ಲಿ ಬಾಗವಹಿಸುತ್ತಿದ್ದವರ ಬಗ್ಗೆ ಸಮಗ್ರ ಮಾಹಿತಿಯನ್ನು  ದಾಖಲಿಸಿದ ಕೀತಿ೯ ಚೆನ್ನಬಸವಣ್ಣನವರಿಗೆ ಸಲ್ಲುತ್ತದೆ.



‘ಅಕ್ಕಮಹಾದೇವಿತಾಯಿಯರು ಉಡತಡಿಯಿಂದ ಅನುಭವಮಂಟಪಕ್ಕೆ ಬಂದಾಗ’

ಅಜಕೋಟಿ ವರುಷದವರೆಲ್ಲರೂ ಹಿರಿಯರೇ 
ಹುತ್ತೇರಿ ಬೆತ್ತ ಬೆಳೆದ ತಪಸ್ವಿಗಳೆಲ್ಲರೂ ಹಿರಿಯರೇ
ಮತಿಗೆಟ್ಟು ಒಂದನಾಡ ಹೋಗಿ ಒಂಬತ್ತನಾಡುವ 
ಅಜ್ಞಾನಿಗಳೆಲ್ಲರೂ ಹಿರಿಯರೇ? ಅನುವರಿದು ಘನವ 
ಬೆರೆಸಿ ಹಿರಿಕಿರಿದೆಂಬ ಭೇದವ ಮರೆದು ಕೂಡಲ ಚೆನ್ನ
ಸಂಗಯ್ಯನಲ್ಲಿ ಬೆರೆಸಿ ಬೇರಿಲ್ಲದಿಪ್ಪ ಹಿರಿತನ 
ನಮ್ಮ ಮಹಾದೇವಿಯಕ್ಕಂಗಾಯ್ತು. ಎಂದು ಅವರ ಅಕ್ಕನ ದಿವ್ಯವ್ಯಕ್ತಿತ್ವವನ್ನು ಪರಿಚಯಿಸಿದವರು ಚೆನ್ನಬಸವಣ್ಣನವರು.

ಅಯ್ಯಾ, ಸಜ್ಜನ ಸದ್ಭಾವಿಗಳ ಸಂಗದಿಂದ ಮಹಾನುಭಾವಿಗಳ ಕಾಣಬಹುದು,
ಮಹಾನುಭಾವಿಗಳ ಸಂಗದಿಂದ ಶ್ರೀಗುರುವ ಕಾಣಬಹುದು,
ಶ್ರೀಗುರುವಿನ ಸಂಗದಿಂದ ಲಿಂಗವ ಕಾಣಬಹುದು,
ಲಿಂಗಸಂಗದಿಂದ ಜಂಗಮವ ಕಾಣಬಹುದು.
ಜಂಗಮಸಂಗದಿಂದ ಪ್ರಸಾದವ ಕಾಣಬಹುದು,
ಪ್ರಸಾದದಿಂದ ಆಚಾರವ ಕಾಣಬಹುದಯ್ಯಾ.
ಆಚಾರದಿಂದ ತನ್ನ ಕಾಣಬಹುದಯ್ಯಾ
 ಇದು ಕಾರಣ ಕೂಡಲಚೆನ್ನಸಂಗಮದೇವಾ,
ನಿಮ್ಮ ಸಜ್ಜನ ಸದ್ಭಾವಿಗಳ ಸಂಗವನೆ ಕರುಣಿಸಯ್ಯಾ ನಿಮ್ಮ ಧರ್ಮ. ಎಂದು ಸದಾ ಶರಣರ ಸಂಗದಲ್ಲೇ ಬೆಳದರು ಚೆನ್ನಬಸವಣ್ಣನವರು.

ಗುರುಶಿಷ್ಯಸಂಬಂಧವನೇನೆಂದುಪಮಿಸುವೆ ?
ಜ್ಯೋತಿಯಲೊದಗಿದ ಜ್ಯೋತಿಯಂತಿರಬೇಕು,
ದರ್ಪಣದೊಳಡಗಿದ ಪ್ರತಿಬಿಂಬದಂತಿರಬೇಕು,
ಸ್ಫಟಿಕದೊಳಗಿರಿಸಿದ ರತ್ನದಂತಿರಬೇಕು,
ರೂಪಿನ ನೆಳಲಿನ ಅಂತರಂಗದಂತಿರಬೇಕು.
ಇದು ಕಾರಣ, ಕೂಡಲಚೆನ್ನಸಂಗಯ್ಯಾ
ದರ್ಪಣವ ದರ್ಪಣಕ್ಕೆ ತೋರಿದಂತಿರಬೇಕು, ಗುರು ಶಿಷ್ಯರ ಸಂಬಂಧವು ಜ್ಯೋತಿಯು ಪ್ರತಿ ಜ್ಯೋತಿಯನ್ನು ಕೂಡಿದಂತಿರಬೇಕೆಂದು ಗುರು ಶಿಷ್ಯರ ಸಂಬಂಧವು ಕನ್ನಡಿಯನ್ನು ಕನ್ನಡಿಗೆ ತೋರಿದಂತಿರಬೇಕು, ಬೆಳಕಲ್ಲಿ ಬೆಳಕು ಕೂಡಿದಂತಿರಬೇಕು,
ಗುರುವೆಂಬ ಪ್ರತಿಭಾವವಿಲ್ಲದ ಶಿಷ್ಯ;
ಶಿಷ್ಯನೆಂಬ ಪ್ರತಿಭಾವವಿಲ್ಲದ ಗುರು;
ಏನೆಂಬೆನೇನೆಂಬೆ ಎರಡಿಲ್ಲದ ಘನವನೇನೆಂಬೆನೇನೆಂಬೆ !
ಉಭಯವಳಿದು ಒಂದಾದುದನೇನೆಂಬೆನೇನೆಂಬೆ:
ಕೂಡಲಚೆನ್ನಸಂಗಯ್ಯನಲ್ಲಿ
ಗುರುಶಿಷ್ಯಸಂಬಂಧವಪೂರ್ವ, ಎಂಬುದಾಗಿ ಚೆನ್ನಬಸವಣ್ಣನವರು ಅರಿವೆಂಬ ಗುರು ತತ್ವವನ್ನು ಪ್ರಸ್ತುತಪಡಿಸುತ್ತಾರೆ. 
ಗುರುವಿಲ್ಲದ ಕೂಟ ಲಿಂಗವಿಲ್ಲದ ನೋಟ,
ಜಂಗಮವಿಲ್ಲದ ಮಾಟ, ಪ್ರಸಾದವಿಲ್ಲದ ಊಟ,
ಈ ನಾಲ್ಕರ ಬೇಟವಿಲ್ಲದ ಕೂಟ,
ಕೂಡಲಚೆನ್ನಸಂಗಯ್ಯನೆನಲಿಲ್ಲದ ಆಟ
ಗುರು (ಅರಿವಿಲ್ಲದೆ) ಕೂಡುವುದು,
ಲಿಂಗ (ಆಚಾರವಿಲ್ಲದೇ) ನೋಡುವುದು,
ಜಂಗಮ (ಅನುಭಾವವಿಲ್ಲದೇ) ಸಮಾಜಕ್ಕಲ್ಲದೆ ಮಾಡುವುದು,
ಬದುಕನ್ನೇ ದೇವರ ಪ್ರಸಾದವೆಂದು ಸ್ವೀಕರಿಸಿ ಉಣ್ಣುವ ಅನ್ನದಲ್ಲಿ ಅಭಿರುಚಿ ಇಲ್ಲವೆಂಬುದು.
ಈ ನಾಲ್ಕು ಅರ್ಥವಿಲ್ಲದ ನಡೆಗಳಾಗುವವು,
ಕೂಡಲಚೆನ್ನಸಂಗಯ್ಯನ ನೆನಹ ಬಿಟ್ಟು ಪ್ರಾರ್ಥಿಸುವಂತೆ ಎಂದರು,

ಗುರುವಿನಲ್ಲಿ ಗುಣಸಂಪಾದನೆಯ ಮಾಡುವನ್ನಕ್ಕ
ಗುರುಸಂಬಂಧಿಯಲ್ಲ.
ಲಿಂಗದಲ್ಲಿ ಸ್ಥಲಸಂಪಾದನೆಯ ಮಾಡುವನ್ನಕ್ಕ
ಲಿಂಗಸಂಬಂಧಿಯಲ್ಲ.
ಜಂಗಮದಲ್ಲಿ ಜಾತಿಸಂಪಾದನೆಯ ಮಾಡುವನ್ನಕ್ಕ
ಜಂಗಮಸಂಬಂಧಿಯಲ್ಲ.
ಪ್ರಸಾದದಲ್ಲಿ ರುಚಿಸಂಪಾದನೆಯ ಮಾಡುವನ್ನಕ್ಕ
ಪ್ರಸಾದಸಂಬಂಧಿಯಲ್ಲ.
ಇದು ಕಾರಣ-ಕೂಡಲಚೆನ್ನಸಂಗಯ್ಯಾ
ಮಜ್ಜನಕ್ಕೆರೆವ ಭವಿಗಳನೇನೆಂಬೆ ? ಎಂದು ಗುರುಲಿಂಗಜಂಗಮ ಪ್ರಸಾದದ ಮಹತ್ವವನ್ನು ಸಾರುತ್ತಾರೆ.

ಚೆನ್ನಬಸವಣ್ಣನವರ ವಚನದಲ್ಲಿ ಪಂಚಾಚಾರದ ಸರಳ ವಿವರಣೆ,
ಲಿಂಗಾಚಾರ ಸದಾಚಾರ ಶಿವಾಚಾರ ಗಣಾಚಾರ ಭೃತ್ಯಾಚಾರವೆಂಬ
ಪಂಚಾಚಾರದ ಆಚರಣೆಯೆಂತೆಂದಡೆ:
ಲಿಂಗವಲ್ಲದೆ ಅನ್ಯವನರಿಯದಿಹುದೆ ಲಿಂಗಾಚಾರ.
ಸಜ್ಜನ ಕಾಯಕದಲ್ಲಿ ತಂದು ಗುರು-ಲಿಂಗ-ಜಂಗಮಕ್ಕೆ ನೀಡಿ
ಸತ್ಯಶುದ್ಧನಾಗಿಹುದೆ ಸದಾಚಾರ.
ಶಿವಭಕ್ತರಲ್ಲಿ ಕುಲ ಗೋತ್ರ ಜಾತಿ ವರ್ಣಾಶ್ರಮವನರಸದೆ
ಅವರೊಕ್ಕುದ ಕೊಂಬುದೆ ಶಿವಚಾರ.
ಶಿವಚಾರದ ನಿಂದೆಯ ಕೇಳದಿಹುದೆ ಗಣಾಚಾರ.
ಶಿವಶರಣರೆ ಹಿರಿಯರಾಗಿ ತಾನೆ ಕಿರಿಯನಾಗಿ
ಭಯಭಕ್ತಿಯಿಂದ ಆಚರಿಸುವುದೆ ಭೃತ್ಯಾಚಾರ_
ಇಂತೀ ಪಂಚಾಚಾರವುಳ್ಳ ಪರಮಸದ್ಭಕ್ತರ ಒಕ್ಕುದನಿಕ್ಕಿ ಸಲಹಯ್ಯಾ
ಪ್ರಭುವೆ, ಕೂಡಲಚೆನ್ನಸಂಗಮದೇವಾ. ಎಂದು ಸರಳವಾಗಿ ಪಂಚಾಚಾರಗಳ ಅರ್ಥವನ್ನು ತಿಳಿಸುತ್ತಾರೆ,

ನಂತರ ಶಿವಭಕ್ತನ ಅಂಗವೇ ಲಿಂಗವಾಗುವ ತತ್ವ ಭೋದಿಸುತ್ತಾರೆ,

ಶಿವಭಕ್ತಿಯುಳ್ಳವಂಗೆ;
ಕಾಮ ಬೇಡ, ಕ್ರೋಧ ಬೇಡ, ಲೋಭ ಬೇಡ;
ಮೋಹ ಬೇಡ, ಮದ ಬೇಡ, ಮತ್ಸರ ಬೇಡ.
ಶಿವಭಕ್ತಿಯುಳ್ಳವಂಗೆ:
ಕಾಮ ಬೇಕು, ಕ್ರೋಧ ಬೇಕು, ಲೋಭ ಬೇಕು;
ಮೋಹ ಬೇಕು, ಮದ ಬೇಕು, ಮತ್ಸರ ಬೇಕು.
ಬೇಕೆಂಬುದಕ್ಕಾವ ಗುಣ?
ಕಾಮ ಬೇಕು ಲಿಂಗದಲ್ಲಿ, ಕ್ರೋಧ ಬೇಕು ಕರಣಂಗಳಲ್ಲಿ,
ಲೋಭ ಬೇಕು ಪಾದೋದಕ ಪ್ರಸಾದದಲ್ಲಿ,
ಮೋಹ ಬೇಕು ಗುರುಲಿಂಗ ಜಂಗಮದಲ್ಲಿ,
ಮದ ಬೇಕು ಶಿವಾಚಾರದಿಂದ ಘನವಿಲ್ಲವೆಂದು,
ಮತ್ಸರ ಬೇಕು ಹೊನ್ನು ಹೆಣ್ಣು ಮಣ್ಣಿನಲ್ಲಿ ಇಂತೀ ಷಡ್ಗುಣವಿರವೇಕು.
ಬೇಡವೆಂಬುದಕ್ಕಾವುದು ಗುಣ?
ಕಾಮ ಬೇಡ ಪರಸ್ತ್ರೀಯರಲ್ಲಿ, ಕ್ರೋಧ ಬೇಡ ಗುರುವಿನಲ್ಲಿ, 
ಲೋಭ ಬೇಡ ತನು ಮನ ಧನದಲ್ಲಿ, ಮೋಹ ಬೇಡ ಸಂಸಾರದಲ್ಲಿ,
ಮದ ಬೇಡ ಶಿವಭಕ್ತರಲ್ಲಿ, ಮತ್ಸರ ಬೇಡ ಸಕಲಪ್ರಾಣಿಗಳಲ್ಲಿ.-
ಇಂತೀ ಷಡ್ಗುಣವನರಿದು ಮೆರೆಯಬಲ್ಲಡೆ
ಆತನೇ ಸಹಜ ಸದ್ಭಕ್ತ ಕಾಣಾ ಕೂಡಲಚೆನ್ನಸಂಗಮದೇವಾ. ಹೀಗೇ ಅವರ ಇಂಥಹಾ ಅರಿವಿನ ನುಡಿಗಳು ಸಮಾನ್ಯ ಜನರನ್ನೂ ಜಾಗ್ರತಗೊಳಿಸುತ್ತಿದ್ದವು.

ಈ ಜಗತ್ತು ಕಂಡ ಶ್ರೇಷ್ಠ ದಾರ್ಶನಿಕರಲ್ಲಿ ಒಬ್ಬರಾದ ಗುರು ಬಸವಣ್ಣನವರು, ಅಂದಿನ ಸಮಾಜದ ಆಚರಣೆಗಳಲ್ಲಿ ತಾಂಡವವಾಡುತ್ತಿದ್ದ ಮತೀಯ ವಿಕಾರ, ಮೂಢ ನಂಬಿಕೆ, ಅಂಧಶ್ರದ್ಧೆ ಹಾಗೂ ಶ್ರೇಣೀಕೃತ ಸಮಾಜದ ಜಾತಿ ವ್ಯವಸ್ಥೆ ಇವುಗಳ ವಿರುದ್ಧ ಹೋರಾಟ ಮಾಡುತ್ತಲೇ, ತಿರಸ್ಕಾರಕ್ಕೆ ಒಳಗಾಗಿದ್ದ ತಳ ಸಂಸ್ಕೃತಿಯ ಬಾಯಿಲ್ಲದ ಜನಕ್ಕೆ ಅಂತರಂಗದ ಧ್ವನಿಯಾಗಿ ಅವರ ಆತ್ಮವಿಶ್ವಾಸದ ಪ್ರತೀಕವಾಗಿ ಬೆಳೆದು ಬಂದರು. ಅದೂ ೧೨ ನೇ ಶತಮಾನದ ಆ ಕಾಲದಲ್ಲಿ, ಇಂತಹ ಸಮಯದಲ್ಲಿ  
ಅಂಧಕಾರದ ಪ್ರಪಂಚಕ್ಕೆ ಬಸವಣ್ಣನವರು ಮಾನವೀಯತೆ ಮೇರು ಜ್ಯೋತಿಯಾಗಿ ಬಂದು
ಬಹಿರಂಗ ಶುದ್ಧಿಯಷ್ಟೆ ಅಂತರಂಗದ ಶುದ್ಧಿಯು ಮುಖ್ಯ ಎಂದು ಪ್ರತಿಪಾದಿಸಿ ತಮ್ಮ ಪ್ರಖರ ವೈಚಾರಿಕ ಚಿಂತನೆಗಳ ಮೂಲಕ ಎಲ್ಲರಿಂದಲೂ ಪ್ರೀತಿಸಲ್ಪಡುವವರಾದರು ಗುರು ಬಸವಣ್ಣನವರು.
ಹೀಗಿರುವಾಗ


ಚರ್ಮಶಿಲ್ಪಿಗಳಾದ ಹರಳಯ್ಯನವರ ಮನೆಯಲ್ಲಿ ಬಸವಣ್ಣನವರು ಲಿಂಗ ಪೂಜಿಸಿ, ಪ್ರಸಾದ ಸೇವಿಸಿ, ಹೊರಡುವಾಗ ಧನ್ಯತೆಯಿಂದ ಆಹಾ ಶರಣ ದಂಪತಿಗಳೇ ತಮ್ಮ  ಮನೆಯಲ್ಲಿ ಪ್ರಸಾದ ಸೇವಿಸಿ ಧನ್ಯನಾದೆ, ಶರಣ ಹರಳಯ್ಯನವರೇ 
ಎಂದರು,


ಇದಕ್ಕೆ ಪ್ರತಿಯಾಗಿ ಹರಳಯ್ಯನವರು,
ಶರಣು ಎನ್ನೊಡೆಯ ಎನ್ನ ಜನ್ಮ ಪಾವನ ವಾಯಿತು ಎಂದು ವಂದಿಸುತ್ತಾನೆ. 
ಇದಕ್ಕೆ ಪ್ರತಿಯಾಗಿ ಅಣ್ಣಾ ಬಸವಣ್ಣನವರು,
ತಲೆಬಾಗಿ ಶರಣು ಶರಣಾರ್ಥಿ, ಶರಣ ಹರಳಯ್ಯನವರೇ  ಎಂದುರು, 
ಶರಣು ಎಂಬುದರ ಜೊತೆಗೆ  ಶರಣಾರ್ಥಿ ಎಂದು ವಂದಿಸುತ್ತಾರೆ. ಬಸವಣ್ಣನವರು, ಇದು  ತನಗೆ ತೋರಿದ ಅತೀವ ಗೌರವ, ಈ ಪ್ರೀತಿಗೆ ಚಿರಋಣಿಯಾದ ಹರಳಯ್ಯ ಶರಣಾರ್ಥಿಯ ಹೊರೆ ಹೇಗೆ ಇಳಿಸಬೇಕು ಎಂದು ಚಿಂತಿಸುತ್ತಿದ್ದ, ಈ ಘಟನೆಯನ್ನು ತನ್ನ ಪತ್ನಿ ಕಲ್ಯಾಣಮ್ಮನ ಬಳಿ ಹೇಳಿದನು. ಅಪ್ಪ ಬಸವಣ್ಣನವರು ನನ್ನ ಮೇಲೆ ದೊಡ್ಡ ಹೊರೆ ಹೊರಿಸಿದ್ದಾರೆ, ನಾನು ಶರಣು ಎನ್ನೊಡೆಯ ಎಂದೆ, ಅವರು ಶರಣು ಶರಣಾರ್ಥಿ ಹರಳಯ್ಯನವರೇ ಎಂದು ಸಂಭೋದಿಸಿದರು,
ಈ ಭಾರವನ್ನು ತಾ ತಾಳಲಾರೆ ಕೊಡಲೇ ಏನಾದರೂ ಪರಿಹಾರ ಸುಚಿಸು  ಕಲ್ಯಾಣಿ ಎಂದನು, ಅದಕ್ಕೆ ಚಿಂತಿಸಿದ ಕಲ್ಯಾಣಮ್ಮನವರ ತಲೆಯಲ್ಲಿ ಒಂದು ಯೋಚನೆ ಬರುತ್ತದೆ, ಅದೇ ತಮ್ಮ ಮೈ ಚರ್ಮ ತೆಗೆದು ಚಮ್ಮಾವುಗೆ ಮಾಡುವ ಯೋಚನೆ, ಇದಕ್ಕೆ ಹರಳಯ್ಯ ಒಪ್ಪಿಕೊಂಡು,



ಹಲವು ದಿನಗಳ ಕಾಲ ಹಗಲು ಇರುಳೆನ್ನದೇ ಶ್ರಮಿಸಿ ತನ್ನ ಹಾಗು ತನ್ನ ಪತ್ನಿಯ ಚರ್ಮವನ್ನು ತೆಗೆದು ಸುಂದರವಾದ ಒಂದು ಜೊತೆ ಪಾದರಕ್ಷೆಯನ್ನು ತಯಾರು ಮಾಡಿ, ಅವುಗಳನ್ನು ಶ್ವೇತ ವಸ್ತ್ರದಲ್ಲಿ ಸುತ್ತಿ, ಎದೆಗವಚಿಕೊಂಡು ಮಹಾಮನೆಗೆ ತೆರಳಿ ಬಸವಣ್ಣನವರಿಗೆ ಕೊಟ್ಟು, ಇವುಗಳನ್ನು ಧರಿಸಿ ತಾವು ಈ ಧರೆಯ ಮೇಲೆ ಓಡಾಡಿದರೆ ನನ್ನ ಜನ್ಮ ಸಾರ್ಥಕ ಎಂದು ಹರಳಯ್ಯ ದಂಪತಿಗಳು ಬಸವಣ್ಣನವರಲ್ಲಿ ಭಿನ್ನವಿಸಿಕೊಳ್ಳುತ್ತಾರೆ

ಹರಳಯ್ಯನ ಪ್ರೀತಿ, ಕಂಡು ಅಚ್ಛರಿಗೊಳಗಾದ ಬಸವಣ್ಣನವರು, ಈ ಪಾದುಕೆಗಳನ್ನು ಯಾವುದರ ಮೂಲಕ ಮಾಡಿದ್ದೀರಿ ತುಂಬಾ ಆಕರ್ಷಕ ಮತ್ತು ವಿಶೇಷವಾಗಿವೆ ಎಂದಾಗ,

ಹರಳಯ್ಯ ಹೇಳುತ್ತಾರೆ, ಎನ್ನೊಡಯ ಈ ನಮ್ಮ ದೇಹದ ಚರ್ಮ ತೆಗೆದು ಮಾಡಿದ ಚಮ್ಮಾವುಗೆಗಳು ಎನ್ನೊಡೆಯ ನಿಮ್ಮ ಪಾದ ಇವನ್ನು ಮೆಟ್ಟಿ ಧರಿಸಲು ನಮ್ಮ ಜನ್ಮಪಾವನವಾಗುವುದೆನಲು,

ಅಕಟಕಟಾ, ನಿಮ್ಮ ಶರಣರ ಚಮ್ಮಾವುಗೆಗೆ ಪೃಥ್ವಿ ಸಮಬಾರದು; ಸರಿಯಲ್ಲ ನೋಡಾ. ಕೂಡಲಸಂಗಮದೇವಾ
 ನಿಮ್ಮ ಶರಣರ ಚಮ್ಮಾವುಗೆಗೆ !   


ಇವನ್ನು ಕಾಲಲ್ಲಿ ಧರಿಸುವಷ್ಟು ಯೋಗ್ಯ ನಾನಲ್ಲ, ಶರಣರ ಚರ್ಮದಿಂದ ಮಾಡಿದ ಚಮ್ಮಾವುಗೆಗಳು ದೇವರಿಗೆ ಮಾತ್ರ ಮೀಸಲು ಎಂದು ತಿಳಿಸಿ ಅವುಗಳನ್ನು ತನ್ನ ಶಿರದ ಮೇಲೆ ಧರಿಸಿ ಮರಳಿ ಕೊಡುತ್ತಾರೆ.

ನಂತರ ಹರಳಯ್ಯನವರು ಚಮ್ಮಾವುಗೆಗಳನ್ನು ಮನೆಗೆ ತೆಗೆದುಕೊಂಡು ಹೋಗುವಾಗ ಬ್ರಾಹ್ಮಣರಾದ ಮಧುವರಸರು ಎದುರಾಗಿ ಸುಂದರವಾದ ಚಮ್ಮಾವುಗೆ ನೋಡಿ ಕೇಳಿ, ಕೊಡದಿದ್ದಾಗ ಅವುಗಳನ್ನು ಕಸಿದುಕೊಂಡು ಧರಿಸಿಕೊಳ್ಳಲು ಪ್ರಯತ್ನಿಸಿದಾಗ ಅವರ ಮೈಯಲ್ಲಾ ಉರಿ ಪ್ರಾರಂಭವಾಯಿತು. ಹರಳಯ್ಯನ ಮನೆಯ ಚರ್ಮ ತೊಳೆದ ನೀರಿನಿಂದ ಸ್ನಾನ ಮಾಡಿದಾಗ ಮೈ ಉರಿ ಕಡಿಮೆಯಾಯಿತು. ಈ ಘಟನೆಯಿಂದ ಶರಣರ ಮಹತ್ವವನ್ನು ಅರಿತ ಮಧುವರಸರು ಇಷ್ಟಲಿಂಗ ದೀಕ್ಷೆ ಪಡೆದು ಶರಣರಾದರು.
ಸಮಗಾರ ಹರಳಯ್ಯನವರು ಮತ್ತು ಬ್ರಾಹ್ಮಣ ಮಧುವರಸರು ಇಷ್ಟಲಿಂಗ ದೀಕ್ಷೆ ಪಡೆದ ಕಾರಣ ಜಾತಿಸಂಕರಗೊಂಡು ಬಸವಣ್ಣನವರ ಜಾತ್ಯತೀತ ಧರ್ಮವಾದ ಲಿಂಗವಂತ ಧರ್ಮದ ಭಾಗವಾದರು. ನಡೆ ನುಡಿ ಸಿದ್ಧಾಂತದ ಶರಣರು ಪ್ರತಿಯೊಬ್ಬರು ಸಕಲ ಜೀವಾತ್ಮರಿಗೆ ಲೇಸನೇ ಬಯಸುವ ನೀತಿವಂತರಾದಾಗ ಅವರ ವರ್ಣ, ಜಾತಿ ಮತ್ತು ಉಪಜಾತಿಗಳು ನಿರ್ನಾಮವಾಗಿ ಕೇವಲ ಶರಣರಾದರು. ಜಾತಿ ಮತ್ತು ಅಸ್ಪೃಶ್ಯತೆಯ ವಿಷವನ್ನು ನಮ್ಮ ಸಮಾಜದಿಂದ ಹೊರಹಾಕಿ ಎಲ್ಲರೀತಿಯ ಸಮಾನತೆಯನ್ನು ಸಾಧಿಸುವುದು ಶರಣರ ಉದ್ದೇಶವಾಗಿತ್ತು. ಇಂಥ ಘನ ಉದ್ದೇಶದಿಂದಲೇ ಹರಳಯ್ಯ ಮತ್ತು ಮಧುವರಸರ ಮಕ್ಕಳ ಮದುವೆಯನ್ನು ಶರಣರು ಏರ್ಪಡಿಸಿದರು. ವರ್ಣ ಮತ್ತು ಜಾತಿಪದ್ಧತಿಯ ಮೇಲೆ ನಿಂತ ಮನುಧರ್ಮದ ಸಮಾಜಕ್ಕೆ ದೊಡ್ಡ ಸವಾಲು ಒಡ್ಡಿ ಸಮಾನತೆಯ ಕ್ರಾಂತಿ ಕಹಳೆಯನ್ನು ಊದಿದರು. ಹರಳಯ್ಯನವರ ಮಗ ಶೀಲವಂತನ ಜೊತೆ ಮಧುವರಸರ ಮಗಳು ಲಾವಣ್ಯಳ ಮದುವೆ ಆಯಿತು.
ಆದರೆ ಮನುವಾದಿಗಳು ರೊಚ್ಚಿಗೆದ್ದರು. ಸಮಗಾರ ವರನಿಗೆ ಬ್ರಾಹ್ಮಣ ಕನ್ಯೆಯನ್ನು ಕೊಡುವುದು ಧರ್ಮಬಾಹಿರವಾದ ಅನುಲೋಮ ವಿವಾಹ ಎಂದು ಕಲ್ಯಾಣದ ದೊರೆ ಬಿಜ್ಜಳನ ಕಿವಿ ಚುಚ್ಚಿದರು. ಎಲ್ಲವೂ ಮಂಚಣ್ಣನ ಕಾರುಬಾರು,
ಬಸವಪ್ರಿಯ ರಾಜನಾದ ಬಿಜ್ಜಳನನ್ನೇ ಬಂಧಿಸಿದ ಮಂಚಣ್ಣ,
ಅಣ್ಣ ಬಸವಣ್ಣನವರಿಗೆ ತಕ್ಷಣಕ್ಕೆ ಜಾರಿಯಾಗುವಂತೆ ಗಡಿಪಾರು ಶಿಕ್ಷೆ ವಿಧಿಸಿ ಇದು ರಾಜಾಜ್ಞೆ ಎನಲು, ಬಸವಣ್ಣನವರು, ಶರಣರ ಗೌಪ್ಯ ಸಭೆ ನಡೆಸಿ ಶಾಂತಿಯುತ ಹೋರಾಟ ನಡೆಸಿ, ರಕ್ತಪಾತ ಬೇಡ,
ಕಲ್ಯಾಣ ಕ್ರಾಂತಿ ಜಗತ್ತಿನ ಜನರ ಎದೆಯಾಳದಲ್ಲಿ ಆಸ್ಮಿತೆಯ ಹೋರಾಟದ ಕ್ರಾಂತಿ ಎನಿಸಬೇಕೇ ವಿನಹ ರಕ್ತಕ್ರಾಂತಿ ಆಗ ಕೂಡದು,
ನಮ್ಮ ಪ್ರಾಣಕ್ಕಿಂತ ವಚನ ಸಾಹಿತ್ಯವೇ ಶ್ರೇಷ್ಠ ನನ್ನ ಜೀವ ವಚನಗಳಲ್ಲಿರುತ್ತದೆ,
ಅದನ್ನು ಮುಂದಿನ ತಲೆಮಾರಿನವರಿಗೆ ಲಭಿಸುವಂತೆ ಮಾಡಿ ಎಂದು ಮಾಚಯ್ಯ ಚೌಡಯ್ಯ ಚೆನ್ನಬಸವಣ್ಣ ಸಿದ್ಧರಾಮ ಅಕ್ಕನಾಗಯಿ ಮುಂತಾತ ಶರಣರಿಗೆ ತಿಳಿಸುವ ಪರಿಯೊಂದು ಈ ವಚನದಲ್ಲಿದೆ,
ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ ನೀವು ಬಂದ ಕಾರ್ಯಕ್ಕೆ ನಾನು ಬಂದೆನಯ್ಯ
ನಾನು ನೀವು ಬಂದ ಕಾರ್ಯಕ್ಕೆ ಪ್ರಭುದೇವರು ಬಂದರಯ್ಯಾ/ ಕಲ್ಯಾಣವೆಂಬುದು ಪ್ರಣತೆಯಾಗಿತ್ತು ನಾನು ತೈಲವಾದೆನು ನೀವು ಬತ್ತಿಯಾದಿರಿ
ಪ್ರಭುದೇವರು ಜ್ಯೋತಿಯಾದರು ಪ್ರಣತೆ ಒಡೆದಿತ್ತು ತೈಲ ಚೆಲ್ಲಿತ್ತು ಬತ್ತಿ ಬಿದ್ದಿತ್ತು ಜ್ಯೋತಿ ನಂದಿತ್ತಯ್ಯಾ ನಮ್ಮ ಕೂಡಲಸಂಗನ ಶರಣರ ಮನ ನೊಂದಿತ್ತಯ್ಯಾ. ಎಂದು ಅನಿವಾರ್ಯವಾಗಿ ಕಲ್ಯಾಣವನ್ನು ತೊರೆದು ಕೂಡಲಸಂಗಮಕ್ಕೆ ಹೋದರು,

ನಂತರ ನಡೆದದ್ದೇ ಬೇರೆ,
ಕಂಡ ಕಂಡಲ್ಲಿ ಶರಣರ ಮೇಲೆ ದಾಳಿ,
ವಚನ ಸಾಹಿತ್ಯ ಹಾಳು ಮಾಡುವ ಕೃತ್ಯಗಳು,
ವಿಭೂತಿ ಲಿಂಗ ಕಂಡಲ್ಲಿ ಶಿರ ಛೇದನ ಮಾಡುವಂತೆ ಆದೇಶಿಸಿದ ಮಂಚಣ್ಣ, ಕಂಡ ಕಂಡಲ್ಲಿ ಶರಣರ ಸಾವು ನೋವು, ಅನೇಕ  ಕಷ್ಟ ನಷ್ಟಗಳನ್ನು ಅನುಭವಿಸದರೂ ತಮ್ಮ ನಡೆ ನುಡಿ ಸಿದ್ಧಾಂತವನ್ನು ಬಿಡದೆ ಅದಕ್ಕಾಗಿ ಅವರು ಎಂಥ ತ್ಯಾಗಕ್ಕೂ ಸಿದ್ಧರಾದರು. ಅದಕ್ಕಾಗಿ ನಾಡು ಎಂದೂ ಕಂಡರಿಯದಂಥ ದುರಂತವನ್ನು ಅನುಭವಿಸಿದರು. ಕಣ್ಣು ಕೀಳಿಸಿಕೊಂಡು ಎಳೆಹೂಟ್ಟೆ ಶಿಕ್ಷೆ ಅನುಭವಿಸಿದ ಹರಳಯ್ಯ, ಶೀಲವಂತ ಮತ್ತು ಮಧುವರಸರು ಹುತಾತ್ಮರಾದರು. ಮನುವಾದಿ ಭಯೋತ್ಪಾದಕರಿಂದಾಗಿ ಕಲ್ಯಾಣದಲ್ಲಿ ಅಸಂಖ್ಯಾತ ಶರಣರ ಹತ್ಯಾಕಾಂಡವಾಯಿತು. ಶರಣರ ಸಹಸ್ರಾರು ವಚನ ಕಟ್ಟುಗಳನ್ನು ವೈದಿಕಶಕ್ತಿಗಳು ಸುಟ್ಟು ಹಾಕಿದವು, ಸಹಸ್ರಾರು ವಚನಕಟ್ಟುಗಳು ಬೆಂಕಿಗೆ ಆಹುತಿಯಾದವು. ಸಕಲ ಮಾನವರನ್ನು ವಿಮೋಚನೆಗೊಳಿಸುವಂಥ ವಚನಸಾಹಿತ್ಯವನ್ನು ಶರಣರನ್ನು ಕೂಡ ಮನುವಾದಿಗಳು ಸಂಪ್ರದಾಯವಾದಿಗಳು ಕಂಡ ಕಂಡಲ್ಲಿ ನಾಶ ಮಾಡ ತೋಡಗಿದರು. ಶರಣರು ಮತ್ತು ಬಿಜ್ಜಳನ ಸೈನಿಕರ ನಡುವೆ ಪ್ರಾಣಕ್ಕಾಗಿಯಲ್ಲ ವಚನ ಸಾಹಿತ್ಯಕ್ಕಾಗಿ ಹೋರಾಟ ನಡೆಯಿತು, ನಂತರ ನಡೆದ ದಂಗೆಯಿಂದ ಕೊಂಡಿ ಮಂಚಣ್ಣನ ಕಡೆಯವರಿಂದ ಬಿಜ್ಜಳನು ಕೊಲ್ಲಲ್ಪಡುತ್ತಾನೆ. ಈ ಸಾವನ್ನು ಶರಣರ ಹೆಗಲಿ ಕಟ್ಟಲು ಪ್ರಯತ್ನಿಸಿದ ಮಂಚಣ್ಣ, ಶರಣರನ್ನು ಮುಗಿಸಿಬಿಡಿ ಎಂದು ಆದೇಶವನ್ನು ನೀಡುತ್ತಾನೆ ಅನಿರೀಕ್ಷಿತ ಘಟನೆಯಿಂದ ಶರಣರು ಚೆಲ್ಲಾಪಿಲ್ಲಿಯಾಗುತ್ತಾರೆ. ಅಕ್ಕಮಹಾದೇವಿಯವರು ಮತ್ತು ಅಲ್ಲಮಪ್ರಭುದೇವರು ಶ್ರೀಶೈಲದ ಕದಳಿ ವನದ ಹಾದಿ ಹಿಡಿಯುತ್ತಾರೆ. 
ಅಲ್ಲಮರು ಹೋಗುವಾಗ ಹೀಗೆ ಹೇಳುತ್ತಾರೆ,

ಅವಧಿ ಅಳಿಯಿತ್ತು ವ್ಯವಧಾನ ಉಳಿಯಿತ್ತು. ನಿಜವೆ ನಿಜವನೊಡಗೂಡಿತ್ತು ಕೇಳಾ ಬಸವಣ್ಣ. ಕಲಿಯುಗದಲ್ಲಿ ಮುಂದೆ ಇರಬಾರದು ನಿಜ ಶರಣಂಗೆ ನಡೆ/ ನೀನು ಕಪ್ಪಡಿಯ ಸಂಗಯ್ಯನಲ್ಲಿ ಒಡಗೂಡು. ಉಳುಮೆಯಲ್ಲಿ ನಿಜವನೆಯ್ದು ನಡೆ, ಚೆನ್ನಬಸವಣ್ಣಾ. ಮಹವನೊಡಗೂಡು ಮಡಿವಾಳಯ್ಯ. ಸೊಡ್ಡಳ ಬಾಚರಸರು ಮೊದಲಾದ ಪ್ರಮಥರೆಲ್ಲರು ನಿಜವನೆಯ್ದುವುದು ನಿರ್ವಯಲ ಸಮಾಧಿಯಲ್ಲಿ. ಬಗಿದು ಹೋಗಿ ಲಿಂಗದೊಳಗೆ ಹೊಗುವರೆಲ್ಲರೂ ! ನಡೆಯಿರಿ ಕಾಯವೆರಸಿ ಕೈಲಾಸಕ್ಕೆ, ಕಾಯಸಹಿತ ಎಯ್ದುವುದು. ನಿಮಗೆಲ್ಲರಿಗೆಯೂ ಉಪದೇಶಮಂತ್ರ ತಪ್ಪದು. ನಮಗೆ ಕದಳಿಯಲ್ಲಿ ಹೊಕ್ಕು ನಿಜದಲ್ಲಿ ಒಡಗೂಡುವ ಪರಿಣಾಮ. ಇದು ನಮ್ಮ ಗುಹೇಶ್ವರಲಿಂಗದ ಅಣತಿ ನಿಮಗೆಲ್ಲರಿಗೆಯೂ. ಎಂದು ಅಲ್ಲಮರು ನಿರ್ಗಮಿಸುತ್ತಾರೆ,

ಹರಳಯ್ಯ, ಮಧುವರಸ ಹಾಗೂ ಶೀಲವಂತರಿಗೆ ಎಳೆಹೊಟ್ಟೆ ಶಿಕ್ಷೆ ನೀಡಲಾಗಿತ್ತು. 



ನಂತರ ಕಲ್ಯಾಣಕ್ರಾಂತಿಯನ್ನು ಕಣ್ಣಾರೆ ಕಂಡ ಮೋಳಿಗೆಯ ಮಾರಯ್ಯನವರು ತಮ್ಮ ವಚನದಲ್ಲಿ ಹೀಗೆ ಹೇಳುತ್ತಾರೆ,

ಊರು ಕೆಟ್ಟು ಸೂರೆಯಾಡುವಲ್ಲಿ ಆರಿಗಾರೂ ಇಲ್ಲ. ಬಸವಣ್ಣ ಸಂಗಮಕ್ಕೆ, ಚನ್ನಬಸವಣ್ಣ ಉಳುವೆಗೆ, ಪ್ರಭು ಕದಳಿಗೆ, ಮಿಕ್ಕಾದ ಪ್ರಮಥರೆಲ್ಲರೂ ತಮ್ಮ ತಮ್ಮ ಲಕ್ಷಭಾವಕ್ಕೆ ಮುಕ್ತಿಯನೆಯ್ದಿಹರು. ನನಗೊಂದು ಬಟ್ಟೆಯ ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ.  ಎಂದು ಬೇಸರದಿಂದ ನುಡಿಯುತ್ತಾರೆ,
ಅಂಥಹಾ ಸಂದಿಗ್ಧ ಸ್ಥಿತಿಯಲ್ಲೂ ಗುರುತರವಾದ ಜವಾಬ್ದಾರಿಯನ್ನು ಹೊತ್ತು ಅಲ್ಲಮಪ್ರಭುವಿನ ನಂತರದ ಅನುಭವ ಮಂಟಪದ ಎರಡನೆಯ ಶೂನ್ಯ ಪೀಠಾಧ್ಯಕ್ಷರಾಗಿ, ಸಮರ್ಥವಾಗಿ ಶರಣರ ಆರೈಕೆ ಮಾಡಿದವರು ಚೆನ್ನಬಸವಣ್ಣನವರು.
ಗುರು ಬಸವಣ್ಣನವರ ದಿವ್ಯ ಆದೇಶದಂತೆ ವಚನ ಸಾಹಿತ್ಯವೆಂಬ ಭವ್ಯಸಂಪತ್ತನ್ನು ರಕ್ಷಿಸಲು ಪಣ ತೊಟ್ಟವರು ಚೆನ್ನಬಸವಣ್ಣನವರು.
ಹಾಗೆಯೇ ಕೆಲವು ತಿಂಗಳು ಕಲ್ಯಾಣದ ಸುತ್ತಮುತ್ತಲಿದ್ದು ನಂತರ ಬಸವಣ್ಣನವರು ಕೂಡಲ ಸಂಗಮದಲ್ಲಿ ಐಕ್ಯರಾದ ಮೇಲೆ ಕ್ರಾಂತಿಯು ಮತ್ತಷ್ಟು ಬಿರುಸಾಗುತ್ತದೆ,


ಬಸವಣ್ಣನವರ ಧರ್ಮಪತ್ನಿ ನೀಲಮ್ಮನವರು, ತಂಗಡಗಿಯಲ್ಲಿ ಐಕ್ಯರಾಗುತ್ತಾರೆ,
ಲಿಂಗಪೂಜಾ ನಿರತ ನೀಲಮ್ಮ ತಾಯಿಯು ಪತಿಯ ಅಗಲಿಕೆಯ ಕುರಿತು ಅವರ ನೋವನ್ನು ಈ ವಚನಗಳಲ್ಲಿ ವ್ಯಕ್ತಪಡಿಸಿದ್ದಾಳೆ,

ಅಟ್ಟಡವಿಯಲ್ಲಿ ಬಿಟ್ಟುಹೋದಿರಿ ಬಸವಯ್ಯಾ. ನಟ್ಟನಡುಗ್ರಾಮವ ಕೆಡಿಸಿಹೋದಿರಿ ಬಸವಯ್ಯಾ. ಹುಟ್ಟಿಲ್ಲದ ಬಂಜೆಗೆ ಮಕ್ಕಳ ಕೊಟ್ಟಿರಿ ಬಸವಯ್ಯಾ. ಆ ಮಕ್ಕಳ ಫಲವಿಲ್ಲದಂತೆ ಮಾಡಿದಿರಿ ಬಸವಯ್ಯಾ. ಸಂಗಯ್ಯನಲ್ಲಿ ನೀನೆಂತಪ್ಪ ಮಹಿಮನಯ್ಯಾ ಬಸವಯ್ಯಾ?

ಎಲೆ ಅಯ್ಯಗಳಿರಾ, ಎಲೆಗಳೆದ ವೃಕ್ಷವ ಕಂಡಿರೆ ಬಸವನ? ಎಲೆ ಅಯ್ಯಗಳಿರಾ, ರೂಹಿಲ್ಲದ ಚೋಹವ ಕಂಡಿರೆ ಬಸವನ? ಎಲೆ ಸ್ವಾಮಿಗಳಿರಾ, ನಿಮ್ಮ ನಿಲವಿನ ದರ್ಪಣವ ಕಂಡಿರೆ ಬಸವನ? ಸಂಗಯ್ಯನಲ್ಲಿ ಸ್ವಯವಳಿದ ಬಸವನ ಕುರುಹ ಕಂಡಿರೆ? 

ಆದಿ ಅನಾದಿ ತತ್ವವ ಭೇದಿಸಿಕೊಟ್ಟ ಗುರುವೆ, ಅಪ್ರಮಾಣದ ಬೆಳಗ ಭೇದಿಸಿಕೊಟ್ಟ ಗುರುವೆ, ಅಕಾರ ಉಕಾರ ಮಕಾರ ಕಳೆಯನರುಹಿಸಿಕೊಟ್ಟ ಗುರುವೆ, ಇಷ್ಟ ಪ್ರಾಣ ಭಾವವಿದೆಂದು ತೋರಿದ ಗುರುವೆ, ನಿಜದರಿವನರುಹಿಸಿಕೊಟ್ಟ ಗುರುವೆ, ನಿರ್ಮಳಪ್ರಭೆಯ ತೋರಿದ ಗುರುವೆ, ನಿಜವನನುಭವಕ್ಕೆ ತಂದ ಗುರುವೆ ನಿಮ್ಮ ಘನವ ಕಾಬ ಕಣ್ಣು ಕ್ರಮಗೆಟ್ಟಿತ್ತು ಸಂಗಯ್ಯಾ, ಬಸವನ ಪ್ರಭೆ ಎಲ್ಲಿ ಅಡಗಿತ್ತೊ,

ನಾನಾರ ಹೆಸರ ಕುರುಹಿಡಲಯ್ಯಾ ಬಸವಾ ? 
ನಾನಾರ ರೂಪ ನಿಜವಿಡಲಯ್ಯಾ ಬಸವಾ ? 
ನಾನಾರ ಮಾತ ನೆಲೆಗೊಳಿಸಲಯ್ಯಾ ಬಸವಾ ? 
ನಾನಾರ ಮನವನಂಗೈಸಲಯ್ಯಾ ಬಸವಾ ? 
ಎನ್ನ ಸುಖಾಕಾರಮೂರ್ತಿ ಬಸವನಡಗಿದಬಳಿಕ ಎನಗೆ ಹೆಸರಿಲ್ಲ. 
ರೂಪು ನಿರೂಪವಾಯಿತ್ತಯ್ಯಾ ಸಂಗಯ್ಯಾ, ಬಸವನಡಗಿದಬಳಿಕ,

ನೋಡು ನೋಡು ನೋಡು ನೋಡು ಲಿಂಗವೇ
ನೋಡು ಬಸವಯ್ಯನವರು ಮಾಡುವಾಟವ
ಸಂಗಮಕ್ಕೆ ಬಸವಯ್ಯನವರು ನಮ್ಮನು ಬರ ಹೇಳಿದರಂತೆ.
ಅಲ್ಲಿರುವ ಸಂಗಯ್ಯ ಇಲ್ಲಿಲ್ಲವೇ?
ಎಂದು ನೀಲಮ್ಮನವರು, ತಂಗಡಗಿಯಲ್ಲಿ ಐಕ್ಯರಾಗುತ್ತಾರೆ.
ಅಲ್ಲಿಯೇ ಹಡಪದ ಅಪ್ಪಣನವರು ಐಕ್ಯರಾಗುತ್ತಾರೆ.




ಬೆನ್ನಿಗೆ ವಚನಗಳ ಕಟ್ಟಿಕೊಂಡು ಕುದುರೆಯನ್ನೇರಿ ಖಡ್ಗವನ್ನೇ ಹಿಡಿದು ವಚನ ಸಾಹಿತ್ಯದ ರಕ್ಷಣೆಗಾಗಿ ಊಟ ನಿದ್ರೆಗಳಿಲ್ಲದೆ, ಹಗಲು ರಾತ್ರಿಯನ್ನದೇ ಹೋರಾಡಿದರು,

ವೀರಮಾತೆ ಅಕ್ಕನಾಗಲಾಂಬಿಕೆಯವರು, ಮತ್ತು ಶರಣ ಗಣದ ವೀರಗಣಾಚಾರಿ ಮಡಿವಾಳ ಮಾಚಿದೇವರು,


ಹಾಗೂ ಇತರೆ ಸಾವಿರಾರು ಶರಣರ ಜೊತೆಗೂಡಿ ವಚನಕಟ್ಟುಗಳ ಗಂಟುಗಳನ್ನು ಎತ್ತಿನ ಬಂಡೆಗಳಲ್ಲಿ, ಕುದುರೆಗಳ ಮೇಲೆ ಹಾಗೂ ತೆಲೆಯಮೇಲೆ ಹೊತ್ತು ಕೈಯಲ್ಲಿ ಖಡ್ಗವಿಡಿದು ಕಲ್ಲು ಮುಳ್ಳಿನ ಹಾದಿಯಲ್ಲಿ ದಟ್ಟಾರಣ್ಯದಲ್ಲಿ ನಡೆದು 
ಮಾರ್ಗಮಧ್ಯ ಕಾರಿಮನಿಯಲ್ಲಿ ಎಂಬಲ್ಲಿ ಶರಣರ ವಿರುದ್ಧ ದೊಡ್ಡ ದಾಳಿಯೇ ಆಗುತ್ತದೆ,
ತೊರಗಲ್ಲ ಹತ್ತಿಿರ ಬಿಜ್ಜಳನ ಸೈನಿಕರೊಡನೆ ಕಾದಾಡಿ ಉಳಿದೆಲ್ಲ ಶಿವಶರಣರನ್ನು ಕಾಪಾಡಿದವರು ಮಡಿವಾಳ ಮಾಚಿದೇವರು. ಆನಂತರ ಮುರಗೋಡದಲ್ಲಿ (ಬೆಳಗಾವಿ ಜಿಲ್ಲೆ) ಮತ್ತೊೊಂದು ಭೀಕರ ಯುದ್ಧವಾಗಿ ಹಲವಾರು ಶರಣರು ರಕ್ತಕಾರಿ ಸಾಯುತ್ತಾರೆ ಅದೇ ಕಾರಿಮನಿಯಲ್ಲಿ ತೀವ್ರ ಗಾಯಗೊಂಡ ವೀರಾದಿವೀರಮಾಚಿದೇವರು ಗೊಡಚಿಯಲ್ಲಿ ಬಸವಬಯಲಲ್ಲಿ ಬಯಲಾಗಿ ಐಕ್ಯರಾಗುತ್ತಾರೆ,
ಶರಣರೆಲ್ಲರನ್ನೂ ರಕ್ಷಿಸಿದ ಧೀರಯೋಧ ಮಹಾಗಣಾಚಾರಿ ಮಾಚಿದೇವರ ನೆನೆದು ಶರಣರು ಕಂಬನಿ ಮಿಡಿದು ಕಣ್ಣೀರ ಸುರಿಸುತ್ತಾರೆ ಅಲ್ಲೇ ಅವರ ಸಮಾದಿ ನಿರ್ಮಿಸಿ. ನಂತರ ಉಳವಿಯ ಕಡೆಗೆ ನೆಡೆಯುತ್ತಾರೆ, ಮಾರ್ಗ ಮಧ್ಯೆ ಹೋಗುವಾಗ ಹೂಬಳ್ಳಿ (ಹುಬ್ಬಳಿ)ಯಲ್ಲಿ ಮೂರು ಸಾವಿರ ಶರಣರು ಲಿಂಗಪೂಜೆ ಮಾಡಿದರು ಅದೇ ಹುಬ್ಬಳ್ಳಿ ಮೂರುಸಾವಿರ ಮಠವಾಯಿತು, ಈಗಿನ ತಿಮ್ಮಸಾಗರ ವಿದ್ಯಾನಗರ ಉಣಕಲ್ ಕೆರೆಯ ತಟದಲ್ಲೇ ಲಿಂಗಾನುಷ್ಟಾನ ಮಾಡಿದ್ದರು, ಚೆನ್ನಬಸವಣ್ಣನವರು,ದಾರವಾಡದಲ್ಲಿ ಇವರ ಸ್ಮರಣಾರ್ಥ ಇವರು ತಂಗಿದ್ದ ಸ್ಥಳದಲ್ಲಿ ದೇವಸ್ಥಾನವೂ ಇದೆ,
ನಂತರ, ಸತ್ತಿಗೇರಿ, ಜಾಲಿಕಟ್ಟಿ, ಮೆಲ್ದೂರ, ಸೊಗಲ, ಮುರಗೋಡ, ಹೊಸೂರು, ಬೈಲಹೊಂಗಲ, ತಿಗಡಿ, ನಾಗಲಾಪುರ, ಶರಣರು ಕಾದಾಡಿದ ಸ್ಥಳವೇ ಕಾದರವಳ್ಳಿ ಕಾದ್ರೋಳಿ, ಹುಣಶಿಕಟ್ಟಿ, ಚಿಕ್ಕನಂದಿಹಳ್ಳಿ, ಲಿಂಗದಳ್ಳಿ, ಕಕ್ಕೇರಿ, ದಾಂಡೇಲಿ, ಮೂಲಕ ಪಶ್ಚಿಮ ಘಟ್ಟಕ್ಕೆ ಬಂದರು ಇಲ್ಲಿನ ದಟ್ಟ ಕಾಡುಗಳಲ್ಲಿ ಹುಲಿ, ಚಿರತೆ, ಆನೆ, ಸಾರಂಗ, ನಾಗರಹಾವು ವಿಷಜಂತುಗಳು ಮತ್ತು ಇತರ ವನ್ಯಜೀವಿಗಳಿವೆ. ಕಲ್ಯಾಣದಿಂದ ಬಂದ ಶರಣರು ದಟ್ಟಾರಣ್ಯದಲ್ಲಿ ಉಳಿದರು ಅದೇ ಇಂದಿನ ಸುಕ್ಷೇತ್ರ (ಉಳವಿ)ಯಾಗಿದೆ ಅಲ್ಲಿನ ದಟ್ಟ ಅರಣ್ಯದಲ್ಲಿ ಮಹಾಮನೆ ನಿರ್ಮಿಸಿದರು, ಇಲ್ಲಿ ಅನೇಕ ಪುರಾತನ ಗುಹೆಗಳಿವೆ, ಅಕ್ಕನಾಗಮ್ಮನ ಗುಹೆ,
ಶರಣರು ಮುಟ್ಟಿದ ಬೆಟ್ಟದ ಕಲ್ಲೇ ವಿಭೂತಿಯಾದ ‘ವಿಭೂತಿ ಕಣಜ’


ದಟ್ಟಾರಣ್ಯದಲ್ಲಿ ನೀರಿಗಾಗಿ ಚೆನ್ನಬಸವಣ್ಣನವರು ಚಿರು ಬೆರಳಿಂದ ತೆಗೆದ ಚಿಲುಮೆಗೆ ಹರಳಯ್ಯನ ಸ್ಮರಣಾರ್ಥ ‘ಹರಳಯ್ಯ ಚಿಲುಮೆ’
‘ಹರಳಯ್ಯ ಚಿಲುಮೆ’

ಚೆನ್ನಬಸವಣ್ಣನವರಿಗೆ ಹಾಲು ನೀಡಿದ ಆಕಳು ಚೆನ್ನಬಸವಣ್ಣನವರ ಐಕ್ಯದ ನಂತರ ಕಲ್ಲಾಗಿದೆ ಆದರೂ ಅದರ ಕೆಚ್ಚಲಲ್ಲಿ ಹಾಲು ಬರುತ್ತಿದೆ ಅದೇ ‘ಆಕಳಗವಿ’ 



ಪ್ರಕೃತಿಯಿದಲ್ಲೇ ನಿರ್ಮಾಣವಾದ ‘ರುದ್ರಾಕ್ಷಿ ಮಂಟಪ ಗುಹೆ’


ಇನ್ನು ಉಳವಿಯ ಸುತ್ತಮುತ್ತಲಿನ ಹಲವಾರು ಸ್ಥಳಗಳು ಶರಣರ ಕುರುಹುಗಳನ್ನು ಸಾರಿ ಸಾರಿ ಹೇಳುತ್ತಿವೆ,.
ಇನ್ನು ಇಲ್ಲಿಂದ ಮುಂದೆ ಸಾಗಿದ ಅಕ್ಕನಾಗಮ್ಮ, ನುಲಿಯ ಚಂದಯ್ಯನವರು ತರೀಕೆರೆ ಹತ್ತಿರದ ಎಣ್ಣೆ ಹೊಳೆ ಪ್ರದೇಶದಲ್ಲಿ ನೆಲೆಸುತ್ತಾರೆ, ಅಲ್ಲಿಯೇ ಅಕ್ಕ ನಾಗಮ್ಮ ಲಿಂಗದಲ್ಲಿ ಲೀನವಾದರು.

ಚಿನ್ಮಯಜ್ಞಾನಿ ಚೆನ್ನಬಸವಣ್ಣನವರು ಲಿಂಗಾಯತ ಧಮ೯ದ ಸಪ್ತ ಪ್ರಮಥರಲ್ಲಿ ಒಬ್ಬರು

, ಜಂಗಮನಾಗಿ ಸಮಯಕ್ಕೆ ಸರಿಯಾಗಿ(ಕಲ್ಯಾಣ ಕ್ರಾಂತಿಯಾದಾಗ) ಖಡ್ಗವಿಡಿದು ವಚನಗಳನ್ನು ರಕ್ಷಣೆಮಾಡಿದ್ದರು

ಜನಸಾಮಾನ್ಯರು ಲಿಂಗಾಯತ ಧಮ೯ದ ತತ್ವಗಳನ್ನು ತಿಳಿದುಕೊಳ್ಳಲು ಉಳವಿಗೆ ಚೆನ್ನಬಸವಣ್ಣನವರ ಹತ್ತಿರ ಬರುತ್ತಿದ್ದರು ಸಮಾಜದಲ್ಲಿ ಜನಸಾಮಾನ್ಯರ ಕಷ್ಟಗಳನ್ನು ಪರಿಹರಿಸಲು ಯುವಕರಲ್ಲಿ ತರಬೇತಿ ಕೊಟ್ಟು ಅವರೊಂದಿಗೆ ವಚನಗಳನ್ನು ಕೊಟ್ಟು ಊರೂರಿಗೆ ಮಾಗ೯ದಶ೯ನಕ್ಕಾಗಿ ಕಳಿಸುತ್ತಿದ್ದರು.
ತಮ್ಮ ೨೪ನೇ ವಯಸ್ಸಿನಲ್ಲೇ ಮಹತ್ತರವಾದ ಜವಾಬ್ಧಾರಿಯನ್ನು ಹೊತ್ತು, ವಚನ ಸಾಹಿತ್ಯವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿ ನಮಗೆಲ್ಲರಿಗೂ ವಚನವೆಂಬ ಅಮೃತವು ಲಭಿಸುವಂತೆ ಮಾಡಿದವರೇ ಚಿನ್ಮಯಜ್ಞಾನಿ ಚೆನ್ನಬಸವಣ್ಣನವರು,

ಹನ್ನೆರಡನೆ ಶತಮಾನದಲ್ಲಿ ಕಲ್ಯಾಣದ ಶರಣರಲ್ಲಿ ಅಗ್ರಗಣ್ಯ ಪುರುಷರಾಗಿ ಬೆಳಗಿದ ಚೆನ್ನಬಸವಣ್ಣನವರು, ಭಕ್ತಿ, ಜ್ಞಾನ ವೈರಾಗ್ಯ ಮೂರ್ತಿಯಾಗಿ ಕಂಗೊಳಿಸಿದ್ದಾರೆ. ಅವಿರಳಜ್ಞಾನಿ, ಸದಮಲಜ್ಞಾನಿ, ಷಟಸ್ಥಲ ಸ್ಥಾಪನಾಚಾರ್ಯ, ಷಟಸ್ಥಲ ಚಕ್ರವರ್ತಿ ದಿವ್ಯಗುಣ ಸಂಪನ್ನರೆಂದು ಚೆನ್ನಬಸವಣ್ಣನವರು ಪ್ರಸಿದ್ಧರಾಗಿದ್ದಾರೆ.
ಅಷ್ಟಾವರಣ ಪಂಚಾಚಾರ ಷಟಸ್ಥಲದ ಪರಿಕಲ್ಪನೆ ಇವರ ಜ್ಞಾನಕ್ಕೆ ಕನ್ನಡಿಯಂತಿವೆ, ಇನ್ನು ಕರಣಹಸಿಗೆ- ಮಂತ್ರಗೋಪ್ಯ ಎಂಬ ಮಹಾನ್ ಗ್ರಂಥದ ಕರ್ತೃವೂ ಚೆನ್ನಬಸವಣ್ಣನವರಾಗಿದ್ದಾರೆ,
ಅಲ್ಲಮರು, ಹಾಗೂ ಗುರು ಬಸವಣ್ಣನವರು ವಹಿಸಿದ ಮಹತ್ತರವಾದ ಕಾರ್ಯವನ್ನು ಸಂಪೂರ್ಣಗೊಳಿಸಿ ಶರಣರ ಅನುಯಾಯಿಗಳ ಮನೆಗಳಲ್ಲಿ ವಚನಗಳ ಹಸ್ತ ಪ್ರತಿಗಳನ್ನು ಇರಿಸಿದರು,
ಮೂರು ಸಾವಿರ ಮಠ ಸೇರಿದಂತೆ ಅನೇಕ ಕಡೆ ಅವರು ಉಳಿಸಿ ಹೋದ ವಚನ ಭಂಡಾರವನ್ನು ಕಾಣಬಹುದಾಗಿದೆ,
ಅನೇಕ ಗ್ರಾಮೀಣ ಪ್ರದೇಶದ ಜನರ ಮನೆಗಳಲ್ಲಿ ಜಗಲಿಯ ಮೇಲೆ ಈ ವಚನ ತಡೋಲೆ ಕಟ್ಟುಗಳು ಕಾಣಸಿಗುತ್ತವೆ,
ದಾಳಿಕೋರರಿಂದ ವಚನಗಳನ್ನು ರಕ್ಷಿಸಲು ಹಸ್ತಪ್ರತಿಗಳನ್ನು ಮಾಡಿ ಮನೆ ಮನೆ ಹಂಚಿ ಅವುಗಳನ್ನು ಸಂರಕ್ಷಿಸುವಂತೆ ಮನವಿ ಮಾಡಿದ ಪರಿಣಾಮ ತಲೆತಲೆಮಾರುಗಳಿಂದಲೂ ಹಾಗೇ ಉಳಿಸಿದ ವಚನ ತಡೋಲೆಗಳು ೨೦ನೇ ಶತಮಾನದಲ್ಲಿ  ಫ,ಗು,ಹಳಕಟ್ಟಿಯವರು ಅತ್ಯಂತ ಪರಿಶ್ರಮದಿಂದ ಗ್ರಾಮ ಗ್ರಾಮಕ್ಕೆ ತಿರುಗಿ ಮನೆಮನೆಗೆ ತೆರಳಿ ಅವನ್ನು ಪಡೆದು ಸಂಶೋಧಿಸಿ, ಅಂದು ಶರಣರು ಸಂರಕ್ಷಿಸಿದ ವಚನಗಳನ್ನು  ಇಂದು ನಮಗೆ ಲಭ್ಯವಾಗುವಂತೆ ಮಾಡಿದವರು ೨೦ನೇ ಶತಮಾನದ ಕಂಡ ಶರಣ ಫ,ಗು,ಹಳಕಟ್ಟಿಯವರು. 
ಅವರು ತಮ್ಮ ಸ್ವಂತ ಮನೆಯನ್ನೇ ಮಾರಿ ವಚನಗಳನ್ನು ಹುಡುಕಿ ತಂದು ಮುದ್ರಿಸಿದರು,
ಇನ್ನು ಈ ವಚನ ಸಾಹಿತ್ಯದ   ಉಳಿವಿಗಾಗಿ ಕಾವಿ ತೊಟ್ಟರೂ ಖಡ್ಗವನ್ನೇ ಹಿಡಿದು ಹೋರಾಡಿದ ಧೀರ ತರುಣ, ಷಟಸ್ಥಲ ಚಕ್ರವರ್ತಿ 
ಜನ್ಮತಃ ಜ್ಞಾನಪರಿಮಳಭರಿತ,

ಪ್ರಭುದೇವರ ದೃಷ್ಠಿಯಲ್ಲಿ ಅವಿರಳ ಜ್ಞಾನಿ,ಸ್ವಯಂಭು ಜ್ಞಾನಿ
, ಅಕ್ಕಮಹಾದೇವಿಯವರ ದೃಷ್ಠಿಯಲ್ಲಿ ಸಮ್ಯಕ ಜ್ಞಾನಿ, 
ಶರಣರ ದೃಷ್ಠಿಯಲ್ಲಿ ಷಟಸ್ಥಲ ಜ್ಞಾನಿ ಎನಿಸಿದ ಪರಮಗುರು ಚೆನ್ನಬಸವಣ್ಣನವರು ತಮ್ಮ ೨೪ನೇ ವಯಸ್ಸಿನಲ್ಲೇ  ದಟ್ಟಾರಾಣ್ಯ ಮಧ್ಯದಲ್ಲಿ ಉಳಿದು ಅಲ್ಲೇ ಬಯಲಲ್ಲಿ ಬಯಲ ಲಿಂಗೈಕ್ಯರಾದರು.


ಅವರು ಈ ಜಗಕ್ಕೆ ಅಚ್ಚಳಿಯದ ವಚನಗಳೆಂಬ ಅರಿವಿನ ಅಮೃತವನ್ನು ಮತ್ತು ಜ್ಞಾನ ಸಂಪತ್ತನ್ನು ಕೊಡುಗೆಯಾಗಿ ನೀಡಿದ್ದಾರೆ,.  
ಅದೇ ಇಂದಿನ ಸುಕ್ಷೇತ್ರ ಉಳವಿ ಎಂಬ ಮಹಾಕ್ಷೇತ್ರವಾಗಿ ಕಂಗೊಳಿಸುತ್ತಿದೆ,.
ತಮ್ಮ ೨೪ನೇ ವಯಸ್ಸಿನಲ್ಲೇ ಜಗತ್ತೇ ಬೆಕ್ಕಸಬೆರಗಾಗುವಂತೆ ಇಷ್ಟೆಲ್ಲ ಸಾಧನೆಗೈದು, ಯಶಸ್ವಿಯಾಗಿ ವಚನಗಳನ್ನು ಉಳಿಸಿ, ಶರಣರ ಕೀರ್ತಿ ಅಜರಾಮರವಾಗುವಂತೆ ಮಾಡಿದ ಜಗತ್ತಿನಲ್ಲೇ ಅತ್ಯಂತ ಮಹಾ ಜ್ಞಾನಿಯಾದ, ಅವಿರಳಜ್ಞಾನಿ ಷಟಸ್ಥಲ ಚಕ್ರವರ್ತಿ ಚೆನ್ನಬಸವಣ್ಣನವರೇ ನಮ್ಮೆಲ್ಲ ಯುವ ಜನಾಂಗಕ್ಕೆ ಸ್ಫೂರ್ತಿಯಾಗಿದ್ದಾರೆ,.
ಅವರು ಮಾಡಿದ ತ್ಯಾಗ, ಅವರು ಪಟ್ಟ ಪರಿಶ್ರಮ, ಅವರು ನಿರ್ವಹಿಸಿದ ಮಹತ್ ಕಾರ್ಯ, ಅವರು ಬದುಕಿದ ಜೀವನ, ಅವರು ನಡೆದು ಬಂದ ಹಾದಿ, ಅವರು ಮಾಡಿದ ಕ್ರಾಂತಿ, ಇಂದಿಗೆ ಮಾತ್ರವಲ್ಲ, ಎಂದೆಂದಿಗೂ ಅಜರಾಮರ, ಅದನ್ನು ಯಾರೂ ಸರಿಗಟ್ಟಲಾಗದು, ಇವರ ಬಗ್ಗೆ ತಿಳಿದರೆ ಯಾವುದೇ ದೇಶದ ಸಂಶೋಧಕರಾದರೂ, ಇತಿಹಾಸ ತಜ್ಞರಾದರೂ, ಬೆರಗಾಗಿ ಇಲ್ಲಿ ಬಂದು ಹೋಗುವುದರಲ್ಲಿ ಎರಡು ಮಾತಿಲ್ಲ,
ಇವರ ಬದುಕು ವ್ಯಕ್ತಿತ್ವ, ಶಬ್ಧಗಳಿಗೆ ನಿಲುಕದ ಅನನ್ಯ ಅಪೂರ್ವ ಅಮೋಘ ಅಪ್ರತಿಮವಾದ ವ್ಯಕ್ತಿತ್ವವದು,

ಅದಕ್ಕಾಗಿಯೇ ಸಾವಿರ ಸಾವಿರ ಶರಣರು, ಜನಪದರು, ಕಾಲಜ್ಞಾನಿಗಳು, ತತ್ವಜ್ಞಾನಿಗಳು,
ಇವರನ್ನು ನೆಚ್ಚಿ ಕೊಂಡಾಡಿದು,
ಇನ್ನು ಕಾಲಜ್ಞಾನಿಗಳಂತೂ ಇವರು ಈ ಜಗತ್ತಿಗೆ ಮತ್ತೊಮ್ಮೆ ಬರುತ್ತಾರೆ,
ಮಾನವೀಯತೆಯ ಅಳಿವಿನ ಕಾಲದಲ್ಲಿ ಉಳವಿಯ ಚೆನ್ನಬಸವಣ್ಣ ಬರುತ್ತಾರೆ, ಶರಣರ ತತ್ವಗಳನ್ನು ಎತ್ತಿಯಿಡಿಯುತ್ತಾರೆ, ದಿಕ್ಕದಿಕ್ಕಿಗೂ ಶರಣತತ್ವವನ್ನೂ ಪಸರಿಸುತ್ತಾರೆ, ಎಂದು ಹಾಡಿಕೊಂಡಾಡಿದ್ದಾರೆ,..
ಇನ್ನು ಬರಿ ೨೪ವರ್ಷಗಳು ಬದುಕಿ ಜಗತ್ತಿನಲ್ಲೇ ಯಾರು ಮಾಡದಷ್ಟು ಕೀರ್ತಿ ಸಂಪಾನೆ ಮಾಡಿ,
ಯುಗಯುಗಕ್ಕೂ ಮಾದರಿಯಾದ ಜ್ಞಾನಪರಿಮಳ ಭರಿತ ಚಿನ್ಮಯಜ್ಞಾನಿ ಚೆನ್ನಬಸವಣ್ಣನವರೇ,
ನಮ್ಮೆಲ್ಲರ  ‘ಯುವ ಕಣ್ಮಣಿ Youth Icon’ಎಂಬುದರಲ್ಲಿ ಎರಡು ಮಾತಿಲ್ಲ.

ಕಲ್ಯಾಣದ ಶರಣರ ಬಗ್ಗೆ ಎಷ್ಟೇ  ಬರೆದರೂ ಕಡಿಮೆಯೇ, ಚೆನ್ನಬಸವಣ್ಣನವರ ಪಾದದಡಿಯಲ್ಲಿ ಕಿಂಚಿತ್ ತೃಣಮಾತ್ರದ ದೂಳ್ ಕಣವಾಗಿವೆ ನನ್ನೀ ೦ಶೂನ್ಯನುಡಿಗಳು,

ಆದರೆ 
ಎಂದಾದರೂ, ಯಾವ ಕ್ಷಣದಲ್ಲಾದರೂ   ಏಳಬಹುದು, ಶರಣ ತತ್ವದ ತಿಳಿ ಗಾಳಿ,
ನೊಂದು ಬೆಂದವರ ಮನದಲ್ಲಾದರೂ ಏಳಬಹುದು, ಅರಿವುಳ್ಳ ಜ್ಞಾನಿಗಳ ಎದೆಯಾಳದಲ್ಲಿ ಚಂಡಮಾರುತವಾಗಿಯೇ ಏಳಬಹುದು  ಶರಣ ತತ್ವದ ಸಿಹಿಗಾಳಿ, ಮಾನವೀಯತೆಯ ಪ್ರೀತಿಯ ಗಾಳಿ…

ಇನ್ನು ಎಷ್ಟೇ ನುಡಿದರೂ, ಬರೆದರೂ ಅದು ಕಡಿಮೆಯೇ, ಅವಿರಳ ಜ್ಞಾನಸೂರ್ಯನ ಮುಂದೆ ಚಿಕ್ಕಹಣತೆ ಹಿಡಿದಂತಾಗುವುದಷ್ಟೇ,..

ನನ್ನೆರೆಡು ತೊದಲು ನುಡಿಗಳು, ಎನ್ನೊಡೆಯ ಚೆನ್ನಬಸವಣ್ಣನ ಪಾದ ದೂಳಿನ ಸಾಸಿರ ಕೋಟಿ ಕಣದೊಳಗಡಗಿ ಬಯಲಾಗಲಿ,..👏🏻👏🏻


       ಲೇಖನ-; ೦ಲೋಕೇಶ್ ಎನ್ ಮಾನ್ವಿ.
                         -/ 9972536176

Comments

  1. ವಚನಸುಧಾ ನಿಜವಾಗ್ಲೂ ವಚನವಾರಿಧೀಯಾಗಿದೆ
    ಅನಂತ ಶರಣುಗಳು
    ಮಹಾದೇವ ಕುಂಬಾರ ಹುಕ್ಕೇರಿ ಬೆಳಗಾವಿ ಅವರಿಂದ

    ReplyDelete

Post a Comment

Popular posts from this blog

ಬಸವಣ್ಣನವರ ವಚನಗಳು, 1 ರಿಂದ 100

ಅಲ್ಲಮಪ್ರಭುದೇವರ ವಚನದ ಭಾವಾರ್ಥ ವಿಶ್ಲೇಷಣೆ-; ಲೋಕೇಶ್ ಎನ್ ಮಾನ್ವಿಯವರಿಂದ.

ಮಾತೋಶ್ರೀ ಸಜ್ಜಲಗುಡ್ಡದ ಶ್ರೀಶರಣಮ್ಮ ತಾಯಿಯವರ ಕುರಿತ ವಿಶೇಷ ಲೇಖನ-ಲೋಕೇಶ್ ಮಾನ್ವಿಯವರಿಂದ.

ಚೆನ್ನಬಸವಣ್ಣನವರ ವಚನ ವಿಶ್ಲೇಷಣೆ

ಅಣ್ಣಬಸವಣ್ಣನ ಅನುಭವ ಮಂಟಪ- ಕಲ್ಯಾಣ ಕ್ರಾಂತಿ, ಇದು ಕಲ್ಯಾಣ ಫೈಲ್ಸ್, THE KALYANA FILES..🙏🏻😢

ಏನಿ ಬಂದಿರಿ ಹದುಳಿದ್ದಿರೆ, ವಿಶ್ವಗುರು_ಬಸವಣ್ಣನವರ ವಚನ ವಿಶ್ಲೇಷಣೆ-

‘ನಿಜಸುಖಿ ಹಡಪದ ಅಪ್ಪಣ್ಣನವರು’ ವಿಶೇಷ ಲೇಖನ,.👌🙏🏻

‘ವಿಶ್ವಗುರು ಬಸವಣ್ಣನವರ ವಚನದಲ್ಲಿ ಕಾನೂನು ಮತ್ತು IPC ಸೆಕ್ಷನ್ಸ್’